ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಕೆಲಸವಾಗಿಲ್ಲ. ಆಂತರಿಕ ಗುದ್ದಾಟ ನಡೆಯುತ್ತಿದ್ದರೂ ಜನರ ಮೇಲೆ ನೇರ ಪರಿಣಾಮ ಬೀರುವುದರಿಂದ ಅವಧಿಗೂ ಮುನ್ನವೇ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಭವಿಷ್ಯ ನುಡಿದಿದ್ದಾರೆ. ಈ ಸರ್ಕಾರದ ಅವಧಿ ಪೂರ್ಣಗೊಳ್ಳಲಿ ಎಂಬ ಅಭಿಪ್ರಾಯ ನನ್ನದು. ಆದರೆ, ವಿಶ್ವಾಸ ಇಲ್ಲ. ಅಲ್ಲದೆ, ಬೊವ್ಮಾಯಿ ಜನಾಭಿಪ್ರಾಯದಿಂದ ಸಿಎಂ ಆಗಿಲ್ಲ. ಸರ್ಕಾರಕ್ಕೆ ಬಿಎಸ್ವೈ ನೆರಳಾಗಿರಬಹುದು. ಯಾಕೆಂದರೆ ಬೊಮ್ಮಾಯಿ ಸಿಎಂ ಆಗಲು ಅರ್ಹರಾಗಿದ್ದರೂ ಯಡಿಯೂರಪ್ಪ ಕೃಪೆಯಿಂದ ಗದ್ದುಗೆ ಏರಿದ್ದಾರೆ. ಸಿಎಂ ಆದ ಬಳಿಕ ಆಡಳಿತ ನಡೆಸುವ ಜಾಣ್ಮೆ ಕೊಂಚ ಕಡಿಮೆಯಾಗಿದೆ ಎನ್ನಿಸುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.