ಬೀಳಗಿ: ಸರ್ಕಾರದ ನಿರ್ದೇಶನ ಮತ್ತು ಸಚಿವ ಮುರುಗೇಶ ಆರ್.ನಿರಾಣಿ ಅವರ ಕಳಕಳಿಯಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಿ, 24 ಬೆಡ್ಗಳ ರೋಗಿಗಳಿಗೆ ಆಕ್ಸಿಜನ್ ದೊರಕಿಸಿ ಕೊಡಲಾಗಿದೆ. ಜನತೆ ಅಂತಕ ಪಡುವ ಅಗತ್ಯವಿಲ್ಲ. ಧೈರ್ಯದಿಂದ ಇರಬೇಕು ಎಂದು ವಿಧಾನ ಪರಿಷತ್ ಸದಸ್ಯ ಹನುಮಂತ ಆರ್.ನಿರಾಣಿ ಹೇಳಿದರು.
ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭವಾದ ಕೋವಿಡ್ ಕೇರ್ ಸೆಂಟರ್ಗೆ ಮಂಗಳವಾರ ಭೇಟಿ ನೀಡಿ, ಆಕ್ಸಿಜನ್ ವ್ಯವಸ್ಥೆ ಪರಿಶೀಲಿಸಿ ಅವರು ಮಾತನಾಡಿದರು.
ತಾಲೂಕು ಆಡಳಿತ ಹಾಗೂ ವೈದ್ಯಾಧಿಕಾರಿಗಳು ಎಲ್ಲ ವ್ಯವಸ್ಥೆ ಮಾಡುವ ಮೂಲಕ ಕರೊನಾ ರೋಗಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಉಸಿರಾಟ ತೊಂದರೆ ಇದ್ದರಿಗೆ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಒಪಿಡಿಗೆ ಆದ್ಯತೆ ನೀಡಿ. ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಗಲಗಲಿ, ಗಿರಿಸಾಗರ, ಕುಂದರಗಿಯಲ್ಲಿ ಕಾರ್ಯನಿರ್ವಹಿಸುವ ಸಿಂಬ್ಬದಿಯನ್ನು ತೊಡಗಿಸಿಕೊಳ್ಳಿ. ಇತರ ಕಾಯಿಲೆಯ ರೋಗಿಗಳಿಗೆ ಮತ್ತು ಹೆರಿಗೆ ಬರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ತಾಲೂಕು ಆಸ್ಪತ್ರೆಯ ಡಾ.ವಿಕಾಸ ಪರ್ವತಿಕರ ಮಾತನಾಡಿ, ಆಕ್ಸಿಜನ್ ಮತ್ತು ಸಿಬ್ಬಂದಿ ಕೊರತೆ ಇರುವುದರಿಂದ ಸದ್ಯಕ್ಕೆ 20 ಜನರಿಗೆ ಮಾತ್ರ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 8 ಜನರಿಗೆ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳವಾರ 12 ಜನರು ಅಡ್ಮಿಟ್ ಆಗಿದ್ದಾರೆ ಎಂದರು.
ಸುನಗ ತಾಂಡಾ ನಂ. 1ರಲ್ಲಿ ಕೋವಿಡ್ ರೋಗಿಯು ಆಸ್ಪತ್ರೆಯಲ್ಲಿ ಬೇಡ್ ಇಲ್ಲದೆ ಅಲೆದಾಟ ಮಾಡುತ್ತಿದ್ದಾನೆ ಎಂದು ಸುದ್ದಿ ತಿಳಿದ ತಹಸೀಲ್ದಾರ್ ಶಂಕರ ಗೌಡಿ ಸೋಂಕಿತ ರೋಗಿಗೆ ಬೀಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಸಚಿವರ ವಿಶೇಷಾಧಿಕಾರಿ ಭೀಮಪ್ಪ ಅಜೂರ, ತಾಲೂಕು ಆರೋಗ್ಯಾಧಿಕಾರಿ ದಯಾನಂದ ಕರೆಣ್ಣವರ, ಸಿಪಿಐ ಸಂಜಯ ಬಳಿಗಾರ, ಡಾ.ಶಿವಪ್ಪ ತೇಲಿ, ಡಾ.ಪ್ರಶಾಂತ ಆನದಿನ್ನಿ, ದಯಾನಂದ ಹನ್ಮಕರ ಇತರರು ಇದ್ದರು.
ಆಕ್ಸಿಜನ್ ಕೊರತೆ ಕಂಡುಬಂದಲ್ಲಿ ತಕ್ಷಣ ಮೇಲಧಿಕಾರಿಗಳ ಮತ್ತು ನಮ್ಮ ಗಮನಕ್ಕೆ ತರಬೇಕು. ತ್ವರಿತವಾಗಿ ವ್ಯವಸ್ಥೆ ಮಾಡಲಾಗುವುದು. ಕರೊನಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮುರಾರ್ಜಿ ವಸತಿ ಶಾಲೆಯಲ್ಲಿ ಹೋಮ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.
– ಹನುಮಂತ ನಿರಾಣಿ ವಿಧಾನ ಪರಿಷತ್ ಸದಸ್ಯ