ಪಣಜಿ: ಒಂದು ರಾಜ್ಯದಲ್ಲಿ ಯಾವುದೇ ಕಾಯ್ದೆ ತಂದರೂ ಸಾಮಾನ್ಯವಾಗಿ ಆ ರಾಜ್ಯದಲ್ಲಷ್ಟೇ ಅದರ ಪರಿಣಾಮ ಬೀರುತ್ತದೆ. ಆದರೆ ಗೋಹತ್ಯಾ ನಿಷೇಧ ಕುರಿತು ಕರ್ನಾಟಕದಲ್ಲಿ ಅನುಮೋದನೆ ಸಿಕ್ಕಿರುವ ಹೊಸ ಕಾಯ್ದೆಯ ಫಾಯಿದೆ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಗೋವಾದಲ್ಲೂ ಅದು ಪರಿಣಾಮ ಬೀರುವ ಸಾಧ್ಯತೆ ಇದ್ದು, ಅಲ್ಲಿನ ಬೀಫ್ಪ್ರಿಯರಿಗೆ ಚಿಂತೆ ಆಗಿದೆಯಂತೆ!
ಗೋಹತ್ಯಾ ನಿಷೇಧ ಸಂಬಂಧ ಹೊಸ ಕಾಯ್ದೆಗೆ ಕರ್ನಾಟಕದ ಸದನದಲ್ಲಿ ಬುಧವಾರ ಅನುಮೋದನೆ ಸಿಕ್ಕಿದ್ದು, ರಾಜ್ಯಪಾಲರ ಅಂಕಿತವಷ್ಟೇ ಬಾಕಿ ಇದೆ. ಆದರೆ ಇದರಿಂದ ಈಗ ಗೋವಾದ ಬೀಫ್ಪ್ರಿಯರಿಗೆ, ಅಲ್ಲಿಗೆ ಬೀಫ್ ಪೂರೈಸುವವರಿಗೆ ಚಿಂತೆ ಆರಂಭವಾಗಿದೆ. ಏಕೆಂದರೆ ಗೋವಿನ ಮಾಂಸಕ್ಕಾಗಿ ಗೋವಾ ಬಹುತೇಕ ದಕ್ಷಿಣದ ರಾಜ್ಯಗಳನ್ನು ಅವಲಂಬಿಸಿದ್ದು, ಅದರಲ್ಲೂ ಅಲ್ಲಿಗೆ ಕರ್ನಾಟಕದಿಂದಲೇ ದೊಡ್ಡಮಟ್ಟದ ಪೂರೈಕೆ ಆಗುತ್ತಿದೆ.
ಗೋವಾದಲ್ಲಿ ಪ್ರತಿನಿತ್ಯ ಸರಾಸರಿ 25 ಟನ್ ಬೀಫ್ ಖರ್ಚಾಗುತ್ತಿದ್ದು, ಆ ಪೈಕಿ ಕರ್ನಾಟಕದಿಂದ ಅದರಲ್ಲೂ ಬೆಳಗಾವಿಯಿಂದ ದೊಡ್ಡಮಟ್ಟದಲ್ಲಿ ಬೀಫ್ ಪೂರೈಕೆ ಆಗುತ್ತಿದೆ. ಇನ್ನು ಪ್ರವಾಸದ ಸೀಸನ್ ಆಗಿರುವ ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ ಇದು ಇನ್ನೂ ಹೆಚ್ಚಾಗಿರುತ್ತದೆ. ಪ್ರವಾಸಿಗರು ಹಾಗೂ ಗೋವಾದಲ್ಲಿ ಶೇ. 30ಕ್ಕಿಂತ ಹೆಚ್ಚಾಗಿರುವ ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಬೀಫ್ ಸೇವಿಸುತ್ತಾರೆ.
ಹೊಸ ಕಾನೂನಿನ ಪ್ರಕಾರ ಗೋವಿನ ಮಾಂಸವನ್ನು ಸಾಗಿಸಿದರೂ ಜೈಲುಪಾಲಾಗುವುದರಿಂದ ಗೋವಾಗೆ ಬೀಫ್ ಸಾಗಣೆ ಕಷ್ಟವಾಗಲಿದೆ. ಇನ್ನು ಮಹಾರಾಷ್ಟ್ರದಲ್ಲಿ ಈಗಾಗಲೇ ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗ ಕರ್ನಾಟಕದಲ್ಲೂ ಕಾನೂನು ಬದಲಾಗಿದೆ. ಇದರಿಂದ ಗೋವಾದ ಬೀಫ್ ಮಾರುಕಟ್ಟೆಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಖುರೇಷಿ ಮೀಟ್ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಮನ್ನಾ ಬೇಪಾರಿ ತಿಳಿಸಿದ್ದಾರೆ. (ಏಜೆನ್ಸೀಸ್)
ಲಕ್ಷಾಂತರ ರೂ. ಖರ್ಚು ಮಾಡಿ ಮದ್ವೆಯಾದೆ- ಹೆಂಡ್ತಿ ಮುಟ್ಟಲು ಬಿಡುತ್ತಿಲ್ಲ: ದುಡ್ಡೂ ಇಲ್ಲ, ಪತ್ನಿಯೂ ಸಿಗದ ನನಗೇನು ಪರಿಹಾರ?
ಅರ್ಚಕರು ಅರೆಬೆತ್ತಲೇಕೆ ಎಂದು ಪ್ರಶ್ನಿಸಿ ಗಲಾಟೆಗೆ ಹೊರಟ ಹೋರಾಟಗಾರ್ತಿ ಅರೆಸ್ಟ್