ಕೊಪ್ಪಳ: ತಾಲೂಕಿನ ಇಂದರಿಗಿ ಗ್ರಾಮದಲ್ಲಿ ರೈತ ಶರಣಪ್ಪ ಹಿರೇ ಕುಂಬಾರ ಮೇಲೆ ಕರಡಿ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ರೈತ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶುಕ್ರವಾರ ರಾತ್ರಿ ಹೊಲಕ್ಕೆ ತೆರಳಿದಾಗ ಕರಡಿ ದಾಳಿ ನಡೆಸಿದೆ. ತೆಲೆ ಹಾಗೂ ಕಿವಿಗೆ ಬಲವಾಗಿ ಕಚ್ಚಿದ್ದು ಗಂಭೀರ ಗಾಯಗಳಾಗಿವೆ. ಕರಡಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ತೆಲೆ ಹಾಗೂ ಕಿವಿಗೆ ಹೊಲಿಗೆ ಹಾಕಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.
ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಿಹಾರ ವಿತರಣೆಗೆ ಕ್ರಮವಹಿಸುವುದಾಗಿ ಆರ್ಎಫ್ಒ ಪ್ರಕಾಶ ಪವಾಡಿಗೌಡರ್ ತಿಳಿಸಿದ್ದಾರೆ.