More

    ಬೀಚ್‌ನಲ್ಲಿ ಕಬ್ಬಿಣದ ಅವಶೇಷ: ತಣ್ಣೀರುಬಾವಿಯಲ್ಲಿ ಸುತ್ತಾಡುವಾಗ ಎಚ್ಚರ

    ಹರೀಶ್ ಮೋಟುಕಾನ ಮಂಗಳೂರು
    ವಿಹಾರಕ್ಕೆ ಬರುವ ಪ್ರವಾಸಿಗರು ತಣ್ಣೀರುಬಾವಿ ಬೀಚ್‌ನಲ್ಲಿ ಸುತ್ತಾಡುವಾಗ ಎಚ್ಚರ ವಹಿಸುವುದು ಅವಶ್ಯ. ಏಕೆಂದರೆ ಇಲ್ಲಿ ಅಪಾಯಕಾರಿ ಕಬ್ಬಿಣದ ಅವಶೇಷವಿದ್ದು, ಜೀವಕ್ಕೆ ಎರವಾಗುವಂತಿದೆ.

    ಆಂಧ್ರಪ್ರದೇಶ ಮೂಲದ ಜಿಎಂಆರ್ ವಿದ್ಯುತ್ ಕಂಪನಿ, ಅವಶೇಷಗಳನ್ನು ತೆರವುಗೊಳಿಸದೆ ಜಾಗ ಖಾಲಿ ಮಾಡಿದ ಕಾರಣ ಪಳೆಯುಳಿಕೆಗಳು ಸಮಸ್ಯೆಯಾಗಿ ಕಾಡುತ್ತಿವೆ. ಹಲವು ವರ್ಷಗಳ ಹಿಂದೆ ಸಮುದ್ರದೊಳಗೆ ಹಾಕಿದ ಕಾಂಕ್ರೀಟ್ ಕಂಬಗಳು, ಪೈಪ್‌ಲೈನ್ ತೆರವುಗೊಳಿಸದ ಕಾರಣ ಇದರ ಮೇಲ್ಭಾಗ ಕಾಣುತ್ತಿದೆ. ಕಬ್ಬಿಣ ತುಕ್ಕು ಹಿಡಿದಿದ್ದು, ಬಹಳಷ್ಟು ಚೂಪಾಗಿಯೂ ಇದ್ದು, ಅಪಾಯ ಆಹ್ವಾನಿಸುತ್ತಿದೆ.
    ಕೆಲವು ಬಾರಿ ಇದು ಮರಳು ಹಾಗೂ ನೀರಿನಲ್ಲಿ ಮುಚ್ಚಿ ಹೋದರೆ ಇನ್ನು ಕೆಲವು ಬಾರಿ ಕಾಣ ಸಿಗುತ್ತದೆ. ಪ್ರವಾಸಿಗರು ತಪ್ಪಿ ಅದರ ಮೇಲೆ ಕಾಲಿಟ್ಟರೆ ಗಂಭೀರ ಗಾಯವಾಗುವ ಅಪಾಯವಿದೆ. ಹೀಗಾಗಿ ಬೀಚ್‌ನ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ.

    ಏನಿದು ಕಬ್ಬಿಣದ ಅವಶೇಷ?: ತಣ್ಣೀರುಬಾವಿ ಬೀಚ್ ಬಳಿ ಸುಮಾರು 15 ವರ್ಷಗಳ ಹಿಂದೆ ವಿದ್ಯುತ್ ಕಂಪನಿಯು ತೇಲುವ ವಿದ್ಯುತ್ ಯೋಜನೆ ಆರಂಭಿಸಿತ್ತು. ಹೀಗಾಗಿ ತನ್ನ ಉಪಯೋಗಕ್ಕಾಗಿ ಬೀಚ್ ದಡದಲ್ಲಿ ಬೃಹತ್ ಕಲ್ಲುಗಳನ್ನು ಹಾಕಿ ಕಾಂಕ್ರೀಟ್ ಪಿಲ್ಲರ್ ಬಳಸಿ ಕಂಬಗಳನ್ನು ನಿರ್ಮಿಸಿತ್ತು. ಬೀಚ್ ಮೂಲಕ ಸಮುದ್ರಕ್ಕೆ ಪೈಪ್‌ಲೈನ್ ಕೂಡ ಅಳವಡಿಕೆ ಮಾಡಲಾಗಿತ್ತು. ಆದರೆ ಸುಮಾರು 10 ವರ್ಷಗಳ ಹಿಂದೆ ಸಂಸ್ಥೆಯು ಈ ಭಾಗದಿಂದ ಯೋಜನೆಯನ್ನು ಹೈದರಾಬಾದ್‌ಗೆ ಸ್ಥಳಾಂತರಿಸಿತ್ತು.

    ಅರ್ಧ ಕಂಬ ಸ್ಥಳಾಂತರ:  ಯೋಜನೆ ಸ್ಥಳಾಂತರವಾಗುತ್ತಿದ್ದಂತೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನು ಅವರು ಸಾಗಾಟ ಮಾಡಿದ್ದರು. ಆದರೆ ಸಮುದ್ರ ತೀರದಲ್ಲಿ ಹಾಕಿದ್ದ ಕಂಬಗಳನ್ನು ತೆರವು ಮಾಡಿರಲಿಲ್ಲ. ಬಳಿಕ ಕಂಬಗಳ ತೆರವಿಗೆ ಸಂಸ್ಥೆಯು ಗುತ್ತಿಗೆ ನೀಡಿತ್ತು. ಆಗ ಸಮುದ್ರದ ಮೇಲಿನ ಪಿಲ್ಲರ್ ತೆರವಾಗಿದ್ದರೂ ಆಳದವರೆಗೆ ತೆಗೆಯದೆ ಹಾಗೆಯೇ ಬಿಡಲಾಗಿತ್ತು. ಸ್ಥಳೀಯರ ಪ್ರಕಾರ ಇದು ನೀರಿನಲ್ಲಿ ಭಾರಿ ಆಳಕ್ಕೆ ಇರುವ ಸಾಧ್ಯತೆ ಇದೆ. ಜತೆಗೆ ನೀರಿನಲ್ಲಿ ಕಲ್ಲಿನ ರಾಶಿಯನ್ನು ಹಾಗೆಯೇ ಬಿಡಲಾಗಿತ್ತು.

    ಎಚ್ಚರ ತಪ್ಪಿದರೆ ಅಪಾಯ: ಕೆಲವು ಸಮಯದ ಹಿಂದೆ ದೋಣಿ ದುರಂತ ನಡೆದ ಸಂದರ್ಭ ಯುವಕನ ಹುಡುಕಾಟಕ್ಕಾಗಿ ಸಮುದ್ರಕ್ಕೆ ಧುಮುಕಿದ ಸ್ಥಳೀಯ ನಿವಾಸಿಯೊಬ್ಬರು ಕಬ್ಬಿಣದ ಅವಶೇಷ ಗಮನಿಸದ ಕಾರಣದಿಂದ ಅವರ ಎಡ ಕಾಲಿಗೆ ಗಂಭೀರ ಸ್ವರೂಪದಲ್ಲಿ ತಿವಿದ ಗಾಯವಾಗಿತ್ತು. ಗಮನ ಹರಿಸದೆ ಇಲ್ಲಿ ಸಮುದ್ರಕ್ಕಿಳಿದರೆ ಅಥವಾ ಪ್ರವಾಸಿಗರು ಈಜಲು ತೆರಳಿದರೆ ಅಪಾಯ ಖಚಿತ. ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸುವಂತೆ ತಣ್ಣೀರುಬಾವಿ ಬೀಚ್ ಅಭಿವೃದ್ಧಿ ಸಮಿತಿಯವರು ಫಲಕ ಅಳವಡಿಸಿದ್ದಾರೆ. ಜತೆಗೆ ಇಲ್ಲಿ ಜೀವ ರಕ್ಷಕರು ಕೂಡ ಎಚ್ಚರಿಕೆ ವಹಿಸಲು ಸೂಚನೆ ನೀಡುತ್ತಾರೆ. ಹೀಗಿದ್ದರೂ ಸಮುದ್ರಕ್ಕೆ ತೆರಳಿದರೆ ಅಪಾಯ ಸಾಧ್ಯತೆ ಇದೆ.

    ತಣ್ಣೀರುಬಾವಿ ಬೀಚ್‌ನಲ್ಲಿ ಕಬ್ಬಿಣದ ಅವಶೇಷ ಅಪಾಯಕಾರಿಯಾಗಿರುವುದು ಗಮನಕ್ಕೆ ಬಂದಿದೆ. ತೆರವು ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಪ್ರವಾಸಿಗರಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗುವುದು.
    ಡಾ.ಭರತ್ ಶೆಟ್ಟಿ ವೈ., ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts