More

    ಹೈಕೋರ್ಟ್ ತಪರಾಕಿ ಬಳಿಕ ಎಚ್ಚೆತ್ತ ಬಿಬಿಎಂಪಿ: ಆದೇಶ ಪಾಲನೆಗೆ ಮುಂದಾದ ಪಾಲಿಕೆ

    ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಗೆ ಹೈಕೋರ್ಟ್ ಹಲವು ಮಾರ್ಗಸೂಚಿ ಪ್ರಕಟಿಸಿದ ಬೆನ್ನಲ್ಲೇ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ಮುಂದಾಗಿದೆ.

    ಪೂರ್ವ, ಪಶ್ಚಿಮ,ದಕ್ಷಿಣ, ದಾಸರಹಳ್ಳಿ, ಬೊಮ್ಮನಹಳ್ಳಿ, ಮಹದೇವಪುರ ಸೇರಿ 8 ವಲಯಗಳ ವ್ಯಾಪ್ತಿಯ ಮುಖ್ಯ ಇಂಜಿನಿಯರ್‌ಗಳಿಗೆ, ಹೈಕೋರ್ಟ್ ಆದೇಶ ಪಾಲನೆ ಕುರಿತು ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಅಧಿಕೃತ ಆದೇಶವನ್ನು ಸದ್ಯದಲ್ಲೇ ಹೊರಡಿಸಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಜಾಗ ಒತ್ತುವರಿ ಮಾಡಿಕೊಂಡು ನಕ್ಷೆ ಮಂಜೂರಾತಿ ಉಲ್ಲಂಘಿಸಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದುವರೆಗೆ 1,49,744 ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದೆ. ಬಿಬಿಎಂಪಿ ಕಾಯಿದೆ 2020ರ ಸೆಕ್ಷನ್ 313ರಂತೆ 22,738 ಕಟ್ಟಡಗಳಿವೆ ಎಂದು ಅಂದಾಜಿಸಲಾಗಿದೆ.ಕಟ್ಟಡ ಉಪವಿಧಿ-2003 ಹಾಗೂ ಪರಿಷ್ಕೃತ ಮಹಾಯೋಜನೆ-2015ರನ್ವಯ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗುತ್ತಿದೆ. ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ನಕ್ಷೆ ಮಂಜೂರಾತಿ ಪಡೆಯದೆಯೇ ಕಟ್ಟಿರುವ ಖಾಸಗಿ ಕಟ್ಟಡಗಳು ಸಾಕಷ್ಟಿವೆ. ನಗರದಲ್ಲಿ ಅಂದಾಜು 18 ಲಕ್ಷ ಸ್ವತ್ತುಗಳಿಂದ ಆಸ್ತಿ ತೆರಿಗೆ ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ’ಬಿ’ ಖಾತಾ ಆಸ್ತಿಗಳ ಸಂಖ್ಯೆ 6.15 ಲಕ್ಷದಷ್ಟಿದೆ. ‘ಬಿ’ ಖಾತಾ ನಿವೇಶನಗಳಲ್ಲಿ ಕಟ್ಟಡ ಕಟ್ಟಲು ಪಾಲಿಕೆಯಿಂದ ನಕ್ಷೆ ಮಂಜೂರಾತಿಯನ್ನೂ ನೀಡುವುದಿಲ್ಲ. ಸಿ.ಸಿ, ಒ.ಸಿ ಸಹ ಕೊಡುತ್ತಿಲ್ಲ. ಹೀಗಾಗಿ, ನಕ್ಷೆ ಮಂಜೂರಾತಿ ಪಡೆಯದೆಯೇ ಅನಧಿಕೃತವಾಗಿ ಲಕ್ಷಾಂತರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.

    ಲಂಗು ಲಗಾಮಿಲ್ಲದೆ ಕಟ್ಟಡ ನಿರ್ಮಿಸುವುದನ್ನು ನಿಯಂತ್ರಿಸಲು ಹಾಗೂ ನಗರದ ಬೆಳವಣಿಗೆಯು ಯೋಜನಾ ಬದ್ಧವಾಗಿರಲೆಂಬ ಕಾರಣಕ್ಕೆ ’ಬಿಬಿಎಂಪಿ ಕಟ್ಟಡ ಉಪವಿಧಿ’ಗಳನ್ನು (ಬೈಲಾ) ರೂಪಿಸಲಾಗಿದೆ. ಆದರೆ, ಪಾಲಿಕೆಯು ಇದರಲ್ಲಿ ವೈಫಲ್ಯ ಕಂಡಿದೆ. ನಗರದಲ್ಲಿ ಯಾವುದೇ ಕಟ್ಟಡ ನಿರ್ಮಿಸಬೇಕಿದ್ದರೂ, ಅದರ ನಕ್ಷೆಯನ್ನು ಪಾಲಿಕೆಗೆ ಒದಗಿಸಿ ಮಂಜೂರಾತಿ ಪಡೆಯಬೇಕು. ನಿಯಮಬದ್ಧವಾಗಿದ್ದರಷ್ಟೆ ಮಂಜೂರಾತಿ ನೀಡಲಾಗುತ್ತದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಪಾಲಿಕೆಯಿಂದ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯಬೇಕು. ಈ ಸಂದರ್ಭದಲ್ಲಿ ಪಾಲಿಕೆಯ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ, ನಕ್ಷೆ ಮಂಜೂರಾತಿ ಪ್ರಕಾರವೇ ಕಟ್ಟಡ ನಿರ್ಮಿಸಿದ್ದರೆ, ಒ.ಸಿ ನೀಡಬೇಕು. ಅಕ್ರಮ ಕಟ್ಟಡಗಳ ನಿರ್ಮಾಣ ತಡೆಯಬೇಕಾದ ಜವಾಬ್ದಾರಿ ಆಯಾ ವಾರ್ಡ್‌ಗಳ ಎಂಜಿನಿಯರ್‌ಗಳದ್ದು. ಆದರೆ, ಕೆಲ ಅಧಿಕಾರಿಗಳು ಮಾಲೀಕರೊಂದಿಗೆ ಶಾಮೀಲಾಗಿ ಅನಧಿಕೃತವಾಗಿ ಕಟ್ಟಡ ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತಿದ್ದಾರೆ. ಇಲ್ಲವೇ ಸ್ಥಳೀಯ ಶಾಸಕರು, ಕಾರ್ಪೋರೇಟರ್‌ಗಳೇ ತಮ್ಮ ವೋಟ್ ಬ್ಯಾಂಕ್‌ಗಾಗಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ನೆರವಾಗುತ್ತಿದ್ದಾರೆ. ಇದು ಅಧಿಕಾರಿಗಳ ಕೈ ಕಟ್ಟಿ ಹಾಕುವಂತಾಗಿದೆ.

    ವಿಶೇಷ ಕಾರ್ಯಾಚರಣೆಯಲ್ಲಿ 15 ಬೀದಿಬದಿ ಮಕ್ಕಳ ಸಂರಕ್ಷಣೆ
    ಒ.ಸಿ ಪಡೆಯದೆ ನಿರ್ಮಾಣ:
    ನಕ್ಷೆಗೆ ಮಂಜೂರಾತಿ ಪಡೆದ ಬಳಿಕ ಅನಿವಾರ್ಯ ಕಾರಣಗಳಿಂದ ಶೇ.5 ಉಲ್ಲಂಘನೆಗಳಾಗಿದ್ದರೆ,ಅಂಥ ಕಟ್ಟಡಗಳಿಗೆ ದಂಡ ಶುಲ್ಕ ವಿಧಿಸಿ ಪಾಲಿಕೆಯು ಒ.ಸಿ ನೀಡುತ್ತದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘನೆ ಆಗಿದ್ದರೆ ಒ.ಸಿ ಸಿಗುವುದಿಲ್ಲ. ನಗರದಲ್ಲಿ ಅನೇಕರು ನಕ್ಷೆಗೆ ಮಂಜೂರಾತಿ ಪಡೆದರೂ ಅದರ ಪ್ರಕಾರ ಕಟ್ಟಡ ನಿರ್ಮಿಸುತ್ತಿಲ್ಲ.ಸೆಟ್‌ಬ್ಯಾಕ್ ಮತ್ತು ಎಫ್‌ಎಆರ್‌ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವುದಂತೂ ಚಾಳಿಯಾಗಿಬಿಟ್ಟಿದೆ. ಉಲ್ಲಂಘನೆ ಪ್ರಮಾಣ ಶೇ.5ಕ್ಕಿಂತ ಹೆಚ್ಚು ಇರುವವರು ಪಾಲಿಕೆಯಿಂದ ಒ.ಸಿ ಪಡೆಯುವ ಗೋಜಿಗೆ ಹೋಗುತ್ತಿಲ್ಲ. ಪರಿಣಾಮ, ಸಾವಿರಾರು ಕಟ್ಟಡಗಳು ಒ.ಸಿ ಪಡೆಯದೆಯೇ ಬಳಕೆಯಾಗುತ್ತಿವೆ. ಇದರಿಂದ ಪಾಲಿಕೆಗೆ ಸಾವಿರಾರು ಕೋಟಿ ವರಮಾನ ಖೋತಾ ಆಗುತ್ತಿದೆ. ಇದನ್ನು ತಪ್ಪಿಸಲು ಪಾಲಿಕೆಯು 2003ರ ಕಟ್ಟಡ ಉಪವಿಧಿಯ ನಿಯಮಗಳಿಗೆ ತಿದ್ದುಪಡಿ ತರಲು ಪ್ರಸ್ತಾವ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದೆ. ಮಂಜೂರಾತಿ ಪಡೆದ ನಕ್ಷೆಗಿಂತ ಶೇ.15 ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೂ ದಂಡ ವಿಧಿಸಿ ಒ.ಸಿ ನೀಡಲು ಪಾಲಿಕೆ ತೀರ್ಮಾನಿಸಿದೆ. ಆದರೆ, ಇದಕ್ಕೆ ಇನ್ನೂ ಸರ್ಕಾರದಿಂದ ಅನುಮೋದನೆ ದೊರೆತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts