ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತೃತೀಯಲಿಂಗಿಗಳು ಹಾಗೂ ಅಂಗವಿಕಲರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
18 ವರ್ಷ ತುಂಬಿದ ತೃತೀಯಲಿಂಗಿಗಳು ಹಾಗೂ ಅಂಗವಿಕಲರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸುವ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಗರದಲ್ಲಿ ಪ್ರಸ್ತುತ 9,182 ತೃತೀಯಲಿಂಗಿಗಳಿದ್ದು, ಇದರಲ್ಲಿ 9,085 ಮಂದಿ ಗುರುತಿನ ಚೀಟಿ ಹೊಂದಿದ್ದಾರೆ. 15 ಮಂದಿ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ, 82 ಮಂದಿ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಸಂಬಂಧ ತೃತೀಯಲಿಂಗಿಗಳ ಸಂಘಟನೆಯ ಸಹಕಾರ ಪಡೆಯುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಮತದಾರರ ಪಟ್ಟಿಯಲ್ಲಿ ತೃತೀಯಲಿಂಗಿಗಳು ಸೇರ್ಪಡೆಗೊಳ್ಳಬೇಕಾದರೆ ವಾಸಸ್ಥಳ ಮತ್ತು ಜನ್ಮದಿನಾಂಕ ದಾಖಲೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ತಾಂತ್ರಿಕ ತೊಂದರೆಯಾಗಿದೆ. ಈ ಕುರಿತು ಆಯಾ ವಲಯದ ಜಂಟಿ ಆಯುಕ್ತರು ಸಮನ್ವಯ ಸಾಧಿಸಿ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಕ್ರಮಕೈಗೊಳ್ಳಬೇಕು ಎಂದು ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಮಾತನಾಡಿ, ಆಯೋಗದ ಮಾರ್ಗಸೂಚಿ ಅನ್ವಯ ತೃತೀಯಲಿಂಗಿಗಳು, ಅಂಗವಿಕಲರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಮತ್ತು ಮತದಾನದ ಜಾಗೃತಿ ಮೂಡಿಸುವ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಕ್ರಮವಹಿಸುವಂತೆ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ, ರಾಜ್ಯ ಮಹಿಳಾ ಅಭಿವೃಧ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಖ್ಯಸ್ಥರಿಗೆ ಸೂಚಿಸಿದರು. ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕಿ ಐಎಎಸ್ ಅಧಿಕಾರಿ ಲತಾ ಮತ್ತಿತರರಿದ್ದರು.
400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ನೋಟಿಸ್; 14 ಕೋಟಿ ರೂ. ಬಾಕಿ ಇದೆ ಎಂದ ಆದಾಯ ತೆರಿಗೆ ಅಧಿಕಾರಿಗಳು!