ಸಿರಗುಪ್ಪ: ಬಯಲಾಟವು ಗಂಡು ಮೆಟ್ಟಿನ ಕಲೆಯಾಗಿದ್ದು, ಕಲೆ ಉಳಿದು ಬೆಳೆದರೆ ಮಾತ್ರ ಕಲಾವಿದರು ಉಳಿಯಲು ಸಾಧ್ಯ. ಪ್ರೇಕ್ಷಕರು, ಕಲಾಸಕ್ತರು, ಸಂಘ-ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ರಾಜ್ಯ ಬಯಲಾಟ ಅಕಾಡೆಮಿ ಸದಸ್ಯ ಕರಿಶೆಟ್ಟಿ ರುದ್ರಪ್ಪ ಹೇಳಿದರು.
ನಗರದ ಗುರುಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿರಿಯ ರಂಗಭೂಮಿ ಕಲಾವಿದ ಜಿ.ವೀರನಗೌಡ ರಚಿಸಿದ ರಂಗಗೀತೆಗಳ ಧ್ವನಿ ಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿರುವ ಬಯಲಾಟ ದೊಡ್ಡಾಟಕ್ಕೆ ಮೂಲ ಬೇರಾಗಿದ್ದು, ಕುಡತಿನಿಯ ಭೀಮೇಶ ಮತ್ತು ರಾಮೇಶ ಎಂಬುವವರು ಬಯಲಾಟದ ಹುಟ್ಟಿನ ಮೂಲ ಪುರುಷರಾಗಿದ್ದಾರೆ. ಇಂದಿಗೂ ಬಯಲಾಟ ಮತ್ತು ದೊಡ್ಡಾಟ ಆರಂಭಕ್ಕೂ ಮುನ್ನ ಪ್ರಾರ್ಥನೆ ಗೀತೆಯಲ್ಲಿ ಕುಡತಿನಿಯ ಭೀಮೇಶ ಮತ್ತು ರಾಮೇಶರನ್ನು ನೆನೆಯಲಾಗುತ್ತಿದೆ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ, ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ, ತಾಯಮ್ಮದೇವಿ ಪುಣ್ಯಾಶ್ರಮದ ಪೀಠಾಧ್ಯಕ್ಷ ಡಾ.ಶಿವಕುಮಾರ ತಾತ ಮಾತನಾಡಿದರು. ಹಾರ್ಮೋನಿಯಂ ಕಲಾವಿದರಾದ ಮದಿರೆ ಮರಿಸ್ವಾಮಿ, ಮೌನಾಚಾರಿ, ಸಿ.ಬಿ.ಬಸವನಗೌಡ, ಶ್ರೀನಿವಾಸ ಸ್ವಾಮಿ, ಶಿವನಗೌಡ, ರಂಗ ಕಲಾವಿದರಾದ ಸುಜಾತಮ್ಮ, ಬೀರಳ್ಳಿ ರಾಮರೆಡ್ಡಿ, ತಿಮ್ಮಾರೆಡ್ಡಿ, ಆರ್.ನಾಗರೆಡ್ಡಿ, ಜಾನಪದ ಕಲಾವಿದ ಮುದುಕಪ್ಪ(ಚಿದಾನಂದ), ಹಿರಿಯ ಕಲಾವಿದ ಎಂ.ಬಸಪ್ಪರನ್ನು ಸನ್ಮಾನಿಸಸಲಾಯಿತು.
ಹಿರಿಯ ರಂಗಕಲಾವಿದ ಜಿ.ವೀರನಗೌಡ, ಹಾಸ್ಯ ಕಲಾವಿದ ಜೆ.ನರಸಿಂಹಮೂರ್ತಿ, ಜಾನಪದ ತಜ್ಞ ಡಾ.ಚೇತನಕುಮಾರ್, ಕಸಾಪ ಕರೂರು ಹೋಬಳಿ ಘಟಕದ ಅಧ್ಯಕ್ಷ ವಿರೂಪಾಕ್ಷಿಗೌಡ, ಕಾರ್ಯದರ್ಶಿ ಕೆ.ಎಂ.ಚಂದ್ರಕಾಂತ, ಡಾ.ಈರಣ್ಣ, ಮುಖಂಡರಾದ ಟಿ.ಕಾಂತಪ್ಪ, ದಿವಾಕರ ನಾರಾಯಣ, ಪಂಪಯ್ಯಸ್ವಾಮಿ, ಎಚ್.ತಿಪ್ಪೇಸ್ವಾಮಿ ಇದ್ದರು.