ಭದ್ರಾವತಿ: ಕಾಯಕಯೋಗಿ ಬಸವಣ್ಣ ಅವರಿಂದ ಅಂದು ಸ್ಥಾಪನೆಯಾಗಿದ್ದ ಅನುಭವ ಮಂಟಪ ಇಂದಿಗೂ ಮಾದರಿಯಾಗಿದೆ ಎಂದು ಉಪತಹಸೀಲ್ದಾರ್ ರಾಧಾಕೃಷ್ಣ ಭಟ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಯಾವ ಕೆಲಸ ಮಾಡಿದರೂ ಅದು ಕಾಯಕ ಎನಿಸಿಕೊಳ್ಳುತ್ತದೆ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಅಂದಿನ ಶಿವಶರಣರು ಮಾಡಿದ ಕಾಯಕವನ್ನು ಮಾದರಿಯಾಗಿರಿಸಿಕೊಂಡು ಇಂದು ಸರ್ಕಾರದಿಂದ ಕಾಯಕ ಶರಣರ ದಿನ ಆಚರಿಸಲಾಗುತ್ತಿದೆ. ಕೇವಲ ಜಯಂತಿ ಆಚರಣೆ ಮಾಡಿದರೆ ಸಾಲದು. ಶಿವಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಗ್ರೇಡ್-2 ತಹಸೀಲ್ದಾರ್ ಮಂಜಾನಾಯ್ಕ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಜಾತ್ಯತೀತ ಮನೋಭಾವದ ವ್ಯಕ್ತಿತ್ವವನ್ನು ಅಂದಿನ ಶರಣರು ಹೊಂದಿದ್ದರು. ಅಂತಹ ಶರಣರ ಕಲ್ಪನೆಗಳು ಇಂದಿಗೂ ಯುವ ಜನತೆಗೆ ಅಗತ್ಯ ಎಂದು ಹೇಳಿದರು. ಎ.ವಿ.ರಾಜ್ ಅರಸ್, ಗಿರಿರಾಜ್, ಅಲೆಕ್ಸ್ ಇತರರಿದ್ದರು.