ಬರೇಲಿ: ಅಪರಾಧ ವಿಭಾಗದ ಪೊಲೀಸರ ಸೋಗಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿದ ದರೋಡೆಕೋರರ ತಂಡ ಚಿನ್ನಾಭರಣ ದೋಚಿ ಪರಾರಿಯಾಗಿದೆ.
ಆರು ಮಂದಿ ದರೋಡೆಕೋರರು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಪುಷ್ಕರ್ಸಿಂಗ್ ಅವರ ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.
ಅಮರಿಯಾ ಪೊಲೀಸ್ ಠಾಣೆಯ ಅಧಿಕಾರಿ ಪುಷ್ಕರ್ ಸಿಂಗ್ ಶಾಸ್ತ್ರಿನಗರದಲ್ಲಿ ವಾಸವಾಗಿದ್ದರು. ಮಂಗಳವಾರ ಸಂಜೆ ಅಪರಾಧ ವಿಭಾಗದ ಪೊಲೀಸರು ಎಂದು ಹೇಳಿಕೊಂಡು ಮನೆಗೆ ಆಗಮಿಸಿದರು. ಮನೆಯಲ್ಲಿದ್ದ ಪುಷ್ಕರ್ ಸಿಂಗ್ ಪತ್ನಿ ಮಗಳು ಹಾಗೂ ಬಾಡಿಗೆದಾರರನ್ನು ಹಿಡಿದುಕೊಂಡು ತಲೆಗೆ ಗನ್ ಇಟ್ಟು ಬೆದರಿಕೆ ಹಾಕಿ ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ.
“ನಾವು (ಎಸ್ಎಚ್ಒ) ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದೇವೆ. ಅಪರಾಧಿಗಳನ್ನು ಶೀಘ್ರದಲ್ಲಿಯೇ ಹಿಡಿಯುವುದು ನಮ್ಮ ಪ್ರಯತ್ನ” ಎಂದು ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ರಾಜೇಶ್ ಪಾಂಡೆ ಹೇಳಿದರು.
ಪೊಲೀಸ್ ಅಧಿಕಾರಿ ಮನೆಯಲ್ಲಿ ನಡೆದಿರುವ ದರೋಡೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ದರೋಡೆಕೋರರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಪಾಂಡೆ ತಿಳಿಸಿದ್ದಾರೆ.
ಮನೆಯ ಸುತ್ತಲೂ ಇದ್ದ ಸಿಸಿ ಟಿವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಅವರು ಹೇಳಿದರು. (ಏಜೆನ್ಸೀಸ್)