ಕಡೂರು: ತಲೆ ಬೋಳಿಸುವುದು (ಕ್ಷೌರ ಮಾಡುವುದು) ಸ್ವಾಭಿಮಾನದ ಕೆಲಸವೇ ಹೊರತು ಕಳ್ಳತನ, ಮೋಸವಲ್ಲ. ಕೆಲ ರಾಜಕಾರಣಿಗಳು ಅಕ್ರಮ ಆಸ್ತಿಯನ್ನು ಗಳಿಸಿದಷ್ಟು ತಲೆ ಬೋಳಿಸುವುದು ಸುಲಭವಲ್ಲ. ಅದೊಂದು ಪುಣ್ಯದ ಕೆಲಸ ಎಂದು ಕ್ಷೌರಿಕ ಬ್ರಿಗೇಡ್ ರಾಜ್ಯ ಸಂಚಾಲಕ ಹಿ.ಶಿ.ರವಿಕುಮಾರ್ ಹೇಳಿದ್ದಾರೆ.
ಯಲ್ಲಾಪುರದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ ಮೋಸ, ವಂಚನೆ, ಕಳ್ಳತನ ಮತ್ತು ದರೋಡೆಯನ್ನು ತಲೆ ಬೋಳಿಸುವುದಕ್ಕೆ ಹೋಲಿಕೆ ಮಾಡಿ ನಿಂದಿಸಿರುವುದನ್ನು ಖಂಡಿಸಿ ಹೇಳಿಕೆ ನೀಡಿರುವ ಹಿ.ಶಿ. ರವಿಕುಮಾರ್, ಸಿ.ಟಿ.ರವಿ ಹೇಳಿಕೆಯಿಂದ ಕ್ಷೌರಿಕರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ. ಅವರು ಕ್ಷೌರಿಕರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೇವರಿಗೆ ಹರಕೆಯ ಮುಡಿ ಕೊಟ್ಟು ಭಕ್ತ ಸಂತುಷ್ಟನಾದ ಕೆಲಸ. ಮಕ್ಕಳಿಗೆ ತಲೆ ಬೋಳಿಸಿದ ನಂತರ ನಾಮಕರಣ ಮಾಡುತ್ತಾರೆ. ಜನ್ಮದಾತರು ಕಾಲವಾದಾಗ ಜನ್ಮದ ಕರ್ಮವನ್ನು ಕಳೆಯಲು ತಲೆ ಬೋಳಿಸಿಕೊಳ್ಳುತ್ತಾರೆ. ಕಷ್ಟದ ಸಂದರ್ಭದಲ್ಲಿ ದೇವರಿಗೆ ಹರಕೆ ಹೊತ್ತು ಹರಕೆ ತೀರಿಸುವುದ ಸಾಮಾನ್ಯ. ನೀವೂ ಹರಕೆ ಸಲ್ಲಿಸಿದವರು. ಆದರೂ ಇಂಥ ಪುಣ್ಯದ ಕೆಲಸವನ್ನು ನೀಚ, ಲಂಪಟ, ಮೋಸ ದರೋಡೆಗೆ ಹೋಲಿಕೆ ಮಾಡಿದ್ದು ಎಷ್ಟು ಸರಿ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹರಿತವಾದ ಕತ್ತಿಯಿಂದ ಬರಿ ಕೇಶವನ್ನೇ ತೆಗೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ಪೂರ್ವಿಕರಿಂದ ಕಲಿತು ಪಳಗಿ ಸುಲಲಿತವಾಗಿ ಮಾಡುತ್ತ ಬಂದಿದ್ದೇವೆ. ಇದು ರಾಜಕಾರಣಿಗಳು ನೀಚ ಬುದ್ಧಿಯಿಂದ ಅಕ್ರಮ ಆಸ್ತಿ ಗಳಿಸಿದಷ್ಟು ಸುಲಭವಲ್ಲ ಎಂದು ತಿರುಗೇಟು ನೀಡಿದ್ದಾರೆ.