ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬಿಎನ್ಪಿ) ಪರಿಸರ ವಲಯ ಕಿರಿದಾಗಿಸುವ ಪ್ರಸ್ತಾವನೆಯನ್ನು ತಕ್ಷಣ ಕೈಬಿಡಬೇಕು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಸರ್ಕಾರವನ್ನು ಒತ್ತಾಯಿಸಿದೆ.
ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಲಾಬಿಗೆ ಮಣಿದು ಹಿಂದಿನ ಸರ್ಕಾರ ಉದ್ಯಾನದ ಪರಿಸರ ವಲಯವನ್ನು 258.96 ಚದರ ಕಿ.ಮೀ ವಿಸ್ತೀರ್ಣನಿಂದ 168.84 ಚದರ ಕಿ.ಮೀ.ಗೆ ಇಳಿಸಲು ಹುನ್ನಾರ ನಡೆಸಿತ್ತು. ಇದಕ್ಕಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪತ್ರ ಬರೆದು ಪರಿಸರ ವಲಯದ ವಿಸ್ತೀರ್ಣ ಇಳಿಸಲು ಅಧಿಸೂಚನೆ ಹೊರಡಿಸುವಂತೆ ಮನವಿಯನ್ನು ಸಲ್ಲಿಸಿತ್ತು. ಅದನ್ನು ಹಿಂಪಡೆಯಬೇಕು ಎಂದು ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ಹರೀಶ್ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ನಗರದ ಜನತೆಯ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಈ ಉದ್ಯಾನವು ವನ್ಯಮೃಗಗಳ ಕಾರಿಡಾರ್ ಆಗಿದೆ. ಪರಿಸರ ಸಮತೋಲನ, ತಾಪಮಾನ ಕಾಪಾಡಿಕೊಳ್ಳಲು ಹಾಗೂ ಮಾಲಿನ್ಯ ನಿಯಂತ್ರಿಸಿ ಜನರ ಜೀವನಮಟ್ಟ ಸುಧಾರಣೆಗೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಇಂತಹ ಉದ್ಯಾನಕ್ಕೆ ಧಕ್ಕೆ ತಂದರೆ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆ. ಅಲ್ಲದೆ, ಉದ್ಯಾನಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡಬಾರದು ಎಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳು ಈಗಾಗಲೇ ಸರ್ಕಾರಕ್ಕೆ ಸೂಚನೆ ನೀಡಿವೆ. ಹೀಗಾಗಿ, ಹಿಂದಿನ ಸರ್ಕಾರ ಕೈಗೊಂಡಿರುವ ಜನವಿರೋಧಿ ಕ್ರಮವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.