ಬೆಂಗಳೂರು/ನವದೆಹಲಿ: ರಾಜ್ಯದ ನಾಲ್ವರು ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಸಹಾಯಕವಾದ ಎಲೆಕ್ಟ್ರೊ-ಮೆಕಾನಿಕಲ್ ರೋಬೋಟ್ ಒಂದನ್ನು ರೂಪಿಸಿ, ರಾಷ್ಟ್ರ ಮಟ್ಟದ ‘ಛಾತ್ರ ವಿಶ್ವಕರ್ಮ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ ‘ಫೀನೋಮ್ಸ್’ ತಂಡ ಈ ಸಾಧನೆ ಮೆರೆದಿದ್ದು, ಎಐಸಿಟಿಯು ನಡೆಸಿದ ಅಖಿಲ ಭಾರತ ಸ್ಪರ್ಧೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಥೀಮ್ನಡಿ ಮೊದಲ ರಾಂಕ್ ಪಡೆದಿದೆ.
ಸಾಯಿರಾಂ ಕಾಲೇಜಿನ ಉಪನ್ಯಾಸಕ ಡಾ. ಪ್ರಭಾಕರನ್ ಟಿ.ಎನ್. ಅವರ ಮಾರ್ಗದರ್ಶನದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಭಿಲಾಷ್ ಎಸ್., ಸೈಯದ್ ಅಪ್ಸಾನಾ ಎ., ಸ್ವಾತಿ ಎಸ್. ಮತ್ತು ಸ್ವಾತಿ ಬಾಲನ್ ಅವರ ತಂಡ, ‘ಮೆಡಿಕಲ್ ಅಸಿಸ್ಟೆನ್ಸ್ ಡ್ರಾಯ್ಡ್’ ತಯಾರಿಸುವ ಪ್ರಾಜೆಕ್ಟನ್ನು ಕೈಗೊಂಡಿತ್ತು. ಸೆರೆಬ್ರಲ್ ಪಾಲ್ಸಿ ರೋಗಿಗಳು ಮತ್ತು ಬುದ್ಧಿಮಾಂದ್ಯತೆ ಹೊಂದಿದವರಿಗೆ ಮಾನಸಿಕ ಮತ್ತು ಸಾಮಾಜಿಕ ಬೆಂಬಲ ಒದಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿಗೆ ಸಹಾಯಕವಾಗುವ ಡ್ರಾಯ್ಡ್ ಇದಾಗಿದೆ.
ಇದನ್ನೂ ಓದಿ: ಮತ್ತೆ ದೆಹಲಿ ಕಡೆಗೆ ಸಿಎಂ ಬಸವರಾಜ ಬೊಮ್ಮಾಯಿ!
ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯದಡಿ ಕಾರ್ಯನಿರ್ವಹಿಸುವ ಎಐಸಿಟಿಯು, ಭಾನುವಾರ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ರಾಜ್ಯದ ಈ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. 50 ಸಾವಿರ ರೂ.ಗಳ ನಗದು ಬಹುಮಾನವನ್ನೊಳಗೊಂಡ ಪ್ರತಿಷ್ಠಿತ ‘ಛಾತ್ರ ವಿಶ್ವಕರ್ಮ ಅವಾರ್ಡ್ 2020’ಅನ್ನು ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರದಾನಿಸಿದರು.
ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. “ಮೆಡಿಕಲ್ ಡ್ರಾಯ್ಡ್ಅನ್ನು ನಿರ್ಮಿಸುವುದು ಸುಲಭವಲ್ಲ. ಕರ್ನಾಟಕದ ಶ್ರೀ ಸಾಯಿರಾಂ ಕಾಲೇಜಿನ ತಂಡ ಈ ಸಾಧನೆ ಮಾಡಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನ 2022 ಹಾಲ್ ಆಫ್ ಫೇಮ್ ಸೇರಿದ BTS