ಬಾಳೆಹೊನ್ನೂರು: ಪಟ್ಟಣದ ಹೊಳೆಬಾಗಿಲಿನ ಭದ್ರಾನದಿ ದಂಡೆ ಮೇಲೆ ಗುರುವಾರ ಸಂಜೆ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಸಂಜೆ ವೇಳೆಗೆ ಭದ್ರಾನದಿ ದಂಡೆಯ ಮರಳಿನ ರಾಶಿ ಮೇಲೆ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ಮೊಸಳೆಯನ್ನು ಸ್ಥಳೀಯರು ಗಮನಿಸಿದ್ದಾರೆ. ಸುಮಾರು 2 ಗಂಟೆ ಮೊಸಳೆ ಮಲಗಿತ್ತು.
ಮೊಸಳೆ ಕಂಡ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಭೇಟಿ ನೀಡಿ, ಬಾಳೆಹೊನ್ನೂರಿನ ಭದ್ರಾನದಿಯಲ್ಲಿ ಮೂರು ಮೊಸಳೆ ಇರುವ ಮಾಹಿತಿಯಿದ್ದು, ಅವು ಆಗಾಗ ನದಿಯಿಂದ ಹೊರಬರುತ್ತಿವೆ. ಈ ಪ್ರದೇಶದಲ್ಲಿ ಸ್ಥಳೀಯರು ಕೋಳಿ ತ್ಯಾಜ್ಯ ಅಥವಾ ಮಾಂಸದ ತ್ಯಾಜ್ಯ ಹಾಕುವುದರಿಂದ ಅಥವಾ ಚಳಿಗೆ ಬಿಸಿಲು ಕಾಯಿಸಲು ಮೊಸಳೆ ಮೇಲೆ ಬಂದಿರಬಹುದು ಎಂದು ತಿಳಿಸಿದ್ದಾರೆ.