ಮಂಗಳೂರು/ಉಡುಪಿ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಪವಿತ್ರ ಹಬ್ಬ ಈದುಲ್ ಅಝ್ ಹಾ(ಬಕ್ರೀದ್) ಶುಕ್ರವಾರ ಸಂಭ್ರಮ, ಸಡಗರ ರಹಿತವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಚರಿಸಲಾಯಿತು.
ಕರೊನಾ ಹಿನ್ನೆಲೆಯಲ್ಲಿ ಈದುಲ್ ಫಿತ್ರ್ ಹಬ್ಬ ನಮಾಜ್ ರಹಿತವಾಗಿ ಆಚರಿಸಲಾಗಿತ್ತು. ಆದರೆ ಈದುಲ್ ಅಝ್ ಹಾ ನಮಾಜ್ಗೆ ಸರ್ಕಾರ ನಿಯಮಗಳಡಿ ಅವಕಾಶ ಕಲ್ಪಿಸಿತ್ತು. ಅದರಂತೆ ಈದ್ಗಾ ಹೊರತುಪಡಿಸಿ ಎಲ್ಲ ಮಸೀದಿಗಳಲ್ಲೂ ನಿಯಮಿತ ಜನರ ಉಪಸ್ಥಿತಿಯಲ್ಲಿ ಹಬ್ಬದ ನಮಾಜ್ ನಡೆಯಿತು. ಜಮಾತ್ನವರಿಗೆ ಸೀಮಿತವಾಗಿ ಸುಮಾರು 50 ಜನರಂತೆ ಬ್ಯಾಚ್ ಮಾಡಿ ನಮಾಜ್ಗೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ದೈಹಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ನಮಾಜ್ನಲ್ಲಿ ಭಾಗಿಯಾದರೂ ಹಸ್ತಲಾಘವ, ಆಲಿಂಗನದಿಂದ ದೂರ ಉಳಿದರು.
ಮಸೀದಿಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ ಮತ್ತು ಈದ್ ಸಂದೇಶ ನಡೆಯಿತು. ಸಂಬಂಧಿಕರು, ನೆರೆಹೊರೆ ಮತ್ತು ಸ್ನೇಹಿತರ ಮನೆಗೆ ಸೌಹಾರ್ದದ ಭೇಟಿ ನೀಡಿ ಶುಭ ಹಾರೈಸಿದರು. ಕಬರ್ ಝಿಯಾರತ್ಗೆ ನಿರ್ಬಂಧ ವಿಧಿಸದ ಕಾರಣ ಅಗಲಿದವರಿಗೆ ಕುಟುಂಬದ ಸದಸ್ಯರು ಸುರಕ್ಷಿತ ಅಂತರ ಕಾಪಾಡುವ ಮೂಲಕ ಸಾಮೂಹಿಕವಾಗಿ ಕಬರ್ ಝಿಯಾರತ್ ನಡೆಸಿದರು.
ಮಂಗಳೂರಿನ ಬಾವುಟ ಗುಡ್ಡೆ ಈದ್ಗಾ ಮಸೀದಿಯಲ್ಲಿ ಬಕ್ರೀದ್ ಹಬ್ಬದಂದು ಸಾವಿರಾರು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದು, ಈ ಬಾರಿ ಸಾರ್ವಜನಿಕ ಪ್ರಾರ್ಥನೆಗೆ ಸರ್ಕಾರದ ನಿರ್ಬಂಧದ ಮೇರೆಗೆ ಈದ್ಗಾ ಮಸೀದಿ ಬಿಕೋ ಅನ್ನುತ್ತಿತ್ತು. ಮೂರು ತಿಂಗಳ ಬಳಿಕ ಉಳ್ಳಾಲ ಕೇಂದ್ರ ಮಸೀದಿಯಲ್ಲಿ ಸಾಮೂಹಿಕ ನಮಾಜ್ ನಡೆಯಿತು.