ಬಾಗಲಕೋಟೆ: ಶಾಸಕ ವೀರಣ್ಣ ಚರಂತಿಮಠ ಜನ್ಮದಿನ ಅಂಗವಾಗಿ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯ ರೋಗಿಗಳಿಗೆ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ನೇತೃತ್ವದಲ್ಲಿ ಹಣ್ಣು, ಹಾಲು ಮತ್ತು ಬ್ರೆಡ್ ವಿತರಿಸಲಾಯಿತು.
ಅಶೋಕ ಸಜ್ಜನ (ಬೇವೂರ) ಮಾತನಾಡಿ, ಕೋವಿಡ್ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತಲ್ಲಣ ಸೃಷ್ಟಿ ಮಾಡಿದೆ. ಗ್ರಾಮೀಣ ಭಾಗದಲ್ಲಿ ಹರಡುತ್ತಿರುವ ಹೆಮ್ಮಾರಿ ನಿಯಂತ್ರಿಸುವಲ್ಲಿ ಶಾಸಕ ವೀರಣ್ಣ ಚರಂತಿಮಠ ಆರಂಭಿಸಿದ ಗ್ರಾಮೀಣ ಭಾಗದಲ್ಲಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಹೊಸ ಪರಿಕಲ್ಪನೆ, ಭರವಸೆ ಹುಟ್ಟು ಹಾಕಿದೆ ಎಂದರು.
ಶಾಸಕ ಚರಂತಿಮಠ ಸೂಚನೆ ಮೇರೆಗೆ ಬಿವಿವಿ ಸಂಘದ ಮೆಡಿಕಲ್ ಕಾಲೇಜು, ದಂತ ಕಾಲೇಜು, ಆಯುರ್ವೇದ ಕಾಲೇಜಿನ ವೈದ್ಯರು ಬಾಗಲಕೋಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ತೆರಳಿ ಸಾರ್ವಜನಿಕರ ಆರೋಗ್ಯ ಸಮೀಕ್ಷೆ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಕೋವಿಡ್ ಭಯ ಕಡಿಮೆಯಾಗುವುದರ ಜತೆಗೆ ಸೋಂಕು ನಿಯಂತ್ರಣಕ್ಕೆ ಬರುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಆಕ್ಸಿಜನ್ ಕೊರತೆ ಉಂಟಾದಾಗ ಜಿಲ್ಲಾ ಆಸ್ಪತ್ರೆಗೆ ಕುಮಾರೇಶ್ವರ ಆಸ್ಪತ್ರೆ ಆಕ್ಸಿಜನ್ ಪೂರೈಸಿದ್ದು ಶ್ಲಾಘನೀಯ ಎಂದು ಹೇಳಿದರು.
ಬಿವಿವಿ ಸಂಘದ ಸದಸ್ಯ ಅಶೋಕ ರೇಣುಕಪ್ಪ, ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಮಲ್ಲಾಪುರ, ವೈದ್ಯಕೀಯ ಅಧೀಕ್ಷಕಿ ಡಾ. ಭುವನೇಶ್ವರಿ ಯಳಮಲಿ, ಡಾ. ಆಶಾಲತಾ ಮಲ್ಲಾಪೂರ, ಡಾ. ಅಶೋಕ ಬಡಕಲಿ, ಡಾ. ಸೊಲಬಣ್ಣವರ್, ಮುಖಂಡರಾದ ಅನಿಲ ಅಕ್ಕಿಮರಡಿ, ರಾಜು ರೇವಣಕರ ಉಪಸ್ಥಿತರಿದ್ದರು.