ಬಾಗಲಕೋಟೆ : ದೇಶದ ವಿವಿಧ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲೂ ಪಡಿತರ ಅಂಗಡಿ ಮಾಲೀಕರಿಗೆ ಕಮಿಷನ್ ಹಣವನ್ನು ನೀಡಬೇಕು ಎಂದು ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಆಗ್ರಹಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಈಚೆಗೆ ಜಿಲ್ಲೆಯ ನ್ಯಾಯಬೆಲೆ ಅಂಗಡಿ ಮಾಲೀಕರು ಹಮ್ಮಿಕೊಂಡಿದ್ದ ನ್ಯಾಯ ಬೆಲೆ ಅಂಗಡಿಗಳ ಸ್ಥಿತಿಗತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಅಂದಾಜು 22 ಸಾವಿರ ನ್ಯಾಯ ಬೆಲೆ ಅಂಗಡಿ ಮಾಲೀಕರು ರಾಜ್ಯದ 4 ಕೋಟಿ 80 ಲಕ್ಷ ಜನರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದಾರೆ. ನಾವು ಸರ್ಕಾರದ ಭಾಗವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ನೋವು, ನಲಿವುಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ದೇಶದ ಬೇರೆ ರಾಜ್ಯಗಳಲ್ಲಿ ಅಲ್ಲಿಯ ಸರ್ಕಾರ ನೀಡುವ ಕಮಿಷನ್ ದರವನ್ನು ನಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡಬೇಕು. ನ್ಯಾಯ ಬೆಲೆ ಅಂಗಡಿಗಳು ದೇವಾಲಯಗಳು ಇದ್ದಂತೆ ನಮ್ಮಲ್ಲಿ ಎಲ್ಲ ಜಾತಿ ಜನಾಂಗದವರು ಬರುತ್ತಾರೆ. ಇಂದು ನ್ಯಾಯಬೆಲೆ ಅಂಗಡಿ ಮಾಲೀಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಕುಮಾರ ಅಂಗಡಿ, ಸಂಗಮೇಶ ಬಳ್ಳೂಳ್ಳಿ, ಬಸವರಾಜ ಹೆಳವರ, ಬಸವರಾಜ ಕೋಟಿ, ವಿಠ್ಠಲ ದಾಸರ, ಎಂ.ವೈ. ಮಲಕಗೊಂಡ, ಸುರೇಶ ಗಡಗಡಿ, ಗೌಡಪ್ಪ ಬಸವರಾಜ ಮಾಗಿ ಸೇರಿ ಜಿಲ್ಲೆಯ ಎಲ್ಲ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರು ಇದ್ದರು.
ಪಡಿತರ ಅಂಗಡಿ ಮಾಲೀಕರು ಸಂಘಟನೆ ಕಡೆ ಹೆಚ್ಚು ಒತ್ತು ಕೊಡಬೇಕು. ಸಂಘಟನೆಯಿಂದ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಸಮಸ್ಯೆಗಳು ದಿನದಿಂದ ದಿನಕ್ಕೆ ಜಟಿಲವಾಗುತ್ತ ಹೋಗುತ್ತವೆ. ನಮ್ಮ ಹೋರಾಟ ಸರ್ಕಾರ ಜತೆಗೆ ಹೊರತು ಪಡಿತರ ಕಾರ್ಡ್ದಾರ ವಿರುದ್ಧವಲ್ಲ. ಹೀಗಾಗಿ ನ್ಯಾಯ ಬೆಲೆ ಅಂಗಡಿ ಮಾಲೀಕರು ಸಾರ್ವಜನಿಕರೊಂದಿಗೆ ವಿಶ್ವಾಸ ವೃದ್ಧಿಸಿಕೊಳ್ಳಬೇಕು. ಸಕ್ಕರೆ, ಅಕ್ಕಿ, ಗೋಧಿ, ತಾಳೆ ಎಣ್ಣೆ ಸೇರಿ ವಿವಿಧ ವಸ್ತುಗಳನ್ನು ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು.
ಟಿ.ಕೃಷ್ಣಪ್ಪ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ