ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಜ.31ರಿಂದ ಫೆ.20 ರವರೆಗೆ ತೊಗರಿಯನ್ನು ಖರೀದಿಸಲಾಗುತ್ತಿದೆ. ನೋಂದಣಿಗೆ ಫೆ.8ರವರೆಗೆ ಅವಧಿ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.
ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಸಲು ಮೊದಲ ಬಾರಿಗೆ ಎನ್ಐಸಿ-ಎಫ್ಸಿಎಸ್ ತಂತ್ರಾಂಶದ ಮೂಲಕ ರೈತರ ನೋಂದಣಿಯನ್ನು ಫ್ರೂಟ್ ಐಡಿ ಮೂಲಕ ನೋಂದಾಯಿಸಿ ಕೊಳ್ಳಲಾಗುತ್ತಿದ್ದು, ರೈತರ ನೋಂದಣಿ ಸಮಯದಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಕಾಲಾವಕಾಶ ಬೇಕಾಗಿರುವುದನ್ನು ಮನಗಂಡು ಫೆ.8ರವರೆಗೆ ನೋಂದಣಿ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ಈಗಾಗಲೇ ನೋಂದಾಯಿಸಿದ ರೈತರ ತೊಗರಿಯನ್ನು ಜ.31ರಿಂದ ಖರೀದಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 6700 ರೈತರು ನೋಂದಾಯಿಸಿ ಕೊಂಡಿದ್ದಾರೆ. ನೋಂದಾಯಿಸಿಕೊಂಡ ರೈತರಿಂದ ಒಟ್ಟು 63388.2 ಕ್ವಿಂಟಾಲ್ ತೊಗರಿಯನ್ನು ಖರೀದಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 20 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರೈತರು ತಮಗೆ ತಿಳಿಸಿದ ದಿನಾಂಕದಂದು ತೊಗರಿಯನ್ನು ಖರೀದಿ ಕೇಂದ್ರಕ್ಕೆ ತರಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಖರೀದಿ ಕೇಂದ್ರಗಳ ವಿವರ
ಬಾಗಲಕೋಟೆ ತಾಲೂಕಿನಲ್ಲಿ ರಾಂಪುರ, ಬೆನಕಟ್ಟಿ, ನೀರಲಕೇರಿ, ದೇವನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಬಾಗಲಕೋಟೆ ಟಿಎಪಿಸಿಎಂಎಸ್, ಬಾದಾಮಿ ತಾಲೂಕಿನ ಬಾದಾಮಿ ಮತ್ತು ಕೆರೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹುನಗುಂದ ತಾಲೂಕಿನ ಹುನಗುಂದ ಟಿಎಪಿಸಿಎಂಎಸ್, ಕೂಡಲಸಂಗಮ, ಚಿಕ್ಕಸಿಂಗನಗುತ್ತಿ, ಹಿರೇಆದಾಪುರ, ಕಂದಗಲ್ಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸೂಳೇಭಾವಿ ಎಫ್ಪಿಒ, ಬೀಳಗಿ ಮತ್ತು ಮುಧೋಳ ತಾಲೂಕಿನ ಟಿಎಪಿಸಿಎಂಎಸ್ ಹಾಗೂ ಜಮಖಂಡಿ ತಾಲೂಕಿನ ಜಮಖಂಡಿ ಟಿಎಪಿಸಿಎಂಎಸ್, ಗೋಠೆ, ಸಾವಳಗಿ, ಚಿಕ್ಕಪಡಸಲಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ತೊದಲಬಾಗಿ ಎಚ್ಎಫ್ಎಸ್ಸಿನಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ.