ಬಾಗಲಕೋಟೆ: ಪ್ರಸಕ್ತ ಸಾಲಿಗೆ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಇಲ್ಲಿವರೆಗೆ 53 ಖಾಸಗಿ ಅನುದಾನ, ಅನುದಾನ ರಹಿತ ಶಾಲೆಗಳು ಶೂನ್ಯ ದಾಖಲಾತಿ ಹೊಂದಿದ್ದು, ಅ. 16 ರೊಳಗೆ ದಾಖಲಾತಿ ಪೂರ್ಣಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಬಿರಾದಾರ ಶಾಲೆಗಳಿಗೆ ನೋಟಿಸ್ ನೀಡಿದ್ದಾರೆ.
ಇಲಾಖೆಯಿಂದ ತುರ್ತಾಗಿ ಶಾಲೆಯಲ್ಲಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಕ್ರಮವಹಿಸುವಂತೆ ಜಿಲ್ಲೆಯ ಎಲ್ಲ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿತ್ತು. ಆದರೆ, ಅ.13 ವರೆಗೆ ಎಸ್ಎಟಿಎಸ್ ತಂತ್ರಾಂಶದ ವರದಿಯಲ್ಲಿ ಯಾವುದೇ ವಿದ್ಯಾರ್ಥಿಗಳು ದಾಖಲಾಗಿರುವುದಿಲ್ಲ. ದಾಖಲಾಗದ ಶಾಲೆಗಳಲ್ಲಿ ಮೂಲ ಸೌಕರ್ಯ ಮತ್ತು ಶಿಕ್ಷಕರು ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ತಿಳಿಸಿದ್ದಾರೆ.
ಅ.16 ರೊಳಗಾಗಿ ಮಕ್ಕಳ ದಾಖಲಾತಿ ಪೂರ್ಣಗೊಳಿಸಲು ಸೂಚಿಸಿದ್ದು, ನಿಗದಿತ ದಿನಾಂಕದೊಳಗಾಗಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳದಿದ್ದರೆ ಅಂತಹ ಶಾಲೆಗಳಿಗೆ ನೀಡಿದ ಅನುಮತಿ, ಮಾನ್ಯತೆಯನ್ನು ಹಿಂಪಡೆಯುವುದರ ಜತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
53 ಶಾಲೆಗಳು ಶೂನ್ಯ ದಾಖಲಾತಿ
ಜಿಲ್ಲೆಯಲ್ಲಿ ಒಟ್ಟು 53 ಶೂನ್ಯ ದಾಖಲಾದ ಶಾಲೆಗಳಿದ್ದು, ಬಾದಾಮಿ ತಾಲೂಕಿನಲ್ಲಿ 9, ಬಾಗಲಕೋಟೆ ಮತ್ತು ಬೀಳಗಿ ತಲಾ ಒಂದು, ಹುನಗುಂದ 14, ಜಮಖಂಡಿ 23 ಹಾಗೂ ಮುಧೋಳ ತಾಲೂಕಿನ 5 ಶಾಲೆಗಳು ಶೂನ್ಯ ದಾಖಲಾತಿ ಹೊಂದಿವೆ.