ಬಾಗಲಕೋಟೆ: ಕರೊನಾ ಸೋಂಕಿತ ಮಹಿಳೆಗೆ ಮೂರು ದಿನ ತಿರುಗಿದರೂ ಯಾವುದೇ ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯದ ಕಾರಣ, ಬಂದ ವಾಹನದಲ್ಲೇ ಹೆಣವಾಗಿ ಹೋದ ಧಾರುಣ ಘಟನೆ ಗುರುವಾರ ನಡೆದಿದೆ.
ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದ ಕಾವೇರಿ (55) ಎಂಬುವವರೇ ಚಿಕಿತ್ಸೆ ಸಿಗದೆ ಮೃತಪಟ್ಟ ನತದೃಷ್ಟೆ.
ತಾಯಿಗೆ ಕೋವಿಡ್ ಲಕ್ಷಣಗಳು ಕಂಡುಬಂದಿದ್ದರಿಂದ ಬಾಗಲಕೋಟೆಯಲ್ಲಿ ಹೆಚ್ಚಿನ ಆಸ್ಪತ್ರೆಯಿದ್ದು ಎಲ್ಲಾದರೂ ಸೂಕ್ತ ಚಿಕಿತ್ಸೆ ಕೊಡಿಸೋಣವೆಂದು ಮಗ ನಿಡಗುಂದಿಯಿಂದ ಕ್ರೂಸರ್ ವಾಹನದಲ್ಲಿ ಕರೆದುಕೊಂಡು ಬಂದು ನಗರದ ವಿವಿಧ ಆಸ್ಪತ್ರೆಯ ಬಾಗಿಲು ಬಡಿದರೂ ಎಲ್ಲೂ ಇವರಿಗೆ ಬೆಡ್ ಸಿಗಲಿಲ್ಲವಂತೆ.
ಕೊನೆಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದ ಕಾರಣ, ಕಾವೇರಿ ಮೃತಪಟ್ಟಿದ್ದಾರೆ. ಕಣ್ಣೀರು ಹಾಕುತ್ತಾ ತಾಯಿಯ ಶವದೊಂದಿಗೆ ಬಂದ ವಾಹನದಲ್ಲೇ ಜಿಲ್ಲಾಡಳಿತವನ್ನು ಶಪಿಸುತ್ತಾ ನಿಡಗುಂದಿಗೆ ಕುಟುಂಬದವರು ಹಿಂತಿರುಗಿದ್ದಾರೆ.