ಬಾಗಲಕೋಟೆ: ಬಿವಿವಿ ಸಂಘದ ಶಾಲೆ ಆಡಳಿತ ಮಂಡಳಿ ಅಡಿಯಲ್ಲಿ ನಡೆಯುವ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ದ ವಿದ್ಯಾರ್ಥಿಗಳಿಗಾಗಿ ಅಳವಡಿಸಲಾಗಿರುವ ಬಿಸಿಯೂಟದ ರೈಸ್ ಸ್ಟೀಮರ್ಗೆ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಅಂದಾಜು 4 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರೈಸ್ ಸ್ಟೀಮರ್ನಲ್ಲಿ ಅರ್ಧ ಗಂಟೆಯಲ್ಲಿ ಎರಡು ಕ್ವಿಂಟಾಲ್ ಅಕ್ಕಿಯನ್ನು ಬೇಯಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ಬಿವಿವಿ ಸಂಘದ ವಿವಿಧ ಹಾಸ್ಪೇಲ್ಗಳಲ್ಲಿ ಅಳವಡಿಸಿದ್ದು, ಈಗ ಬಿಸಿಯೂಟ ತಯಾರಿಕೆಗೆ ರೈಸ್ ಸ್ಟೀಮರ್ನ್ನು ಅಳವಡಿಸಲಾಗಿದೆ. ದಿನಕ್ಕೆ 1500 ರಿಂದ 2000 ವಿದ್ಯಾರ್ಥಿಗಳು ಬಿಸಿಯೂಟವನ್ನು ಸಂಘದಲ್ಲಿ ಸೇವಿಸುತ್ತಾರೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿ ಹೈಸ್ಕೂಲ್ದಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ರೈಸ್ ಸ್ಟೀಮರ್ ಅಳವಡಿಸಿಕೊಂಡಿದ್ದು ಬಿವಿವಿ ಸಂಘ. ಬಿಸಿಯೂಟ ತಯಾರಿಕೆಯಲ್ಲಿ ಸಮಯ, ಗ್ಯಾಸ್ ಉಳಿತಾಯವಾಗಲಿದೆ. ಬಿಸಿಯೂಟ ಮಾಡುವಾಗ ವಿದ್ಯಾರ್ಥಿಗಳಿಗೆ ಮಳೆ ಹಾಗೂ ಬಿಸಿಲಿನಿಂದ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ 11 ಲಕ್ಷ ರೂ ವೆಚ್ಚದಲ್ಲಿ ಊಟ ಮಾಡುವ ಆವರಣಕ್ಕೆ ಮೇಲ್ಛಾವಣಿ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಹೇಳಿದರು.
ಸಂಘದ ಸದಸ್ಯರಾದ ಕುಮಾರ ಹಿರೇಮಠ, ಚಂದ್ರಶೇಖರ ಬ್ಯಾಳಿ, ರೇವಣಪ್ಪ ಕಾಯಿ, ಗುರುಲಿಂಗಪ್ಪ ಅಂಟಿನ, ಡಿಡಿಪಿಐ ಶ್ರೀಶೈಲ ಬಿರಾದಾರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎನ್.ವೈ.ಕುಂದರಗಿ ಇದ್ದರು.