More

    ಅನುದಾನ ಸಂಪೂರ್ಣ ಬಳಕೆಯಾಗಲಿ

    ಬಾಗಲಕೋಟೆ: ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಸಂಪೂರ್ಣ ಬಳಕೆಯಾಗಬೇಕು. ಯಾವುದೇ ರೀತಿಯಲ್ಲಿ ಲ್ಯಾಪ್ಸ್ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಧಿಕಾರಿಗಳಿಗೆ ಕಟ್ಟುನಿಟ್ಟನ ಸೂಚನೆ ನೀಡಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜರುಗಿದ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ಅಕ್ಟೋಬರ ಮಾಹೆಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಪಿಆರ್‌ಇಡಿ ವಿಭಾಗದಿಂದ ಕಳೆದ ಸಾಲಿನಲ್ಲಿ ಎಷ್ಟು ಅನುದಾನ ಬಿಡುಗಡೆಯಾಗಿದೆ. ಅದಲ್ಲಿ ಲ್ಯಾಪ್ಸ್ ಆದ ಹಣವೆಷ್ಟು, ಲ್ಯಾಪ್ಸ್ ಆದ ಹಣಕ್ಕೆ ಜವಾಬ್ದಾರರು ಯಾರು ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಅಲ್ಲದೆ ಕಳೆದ 2-3 ವರ್ಷಗಳಿಂದ ಕೈಗೊಂಡ ಕಾಮಗಾರಿ ಇದು ವರೆಗೂ ಪೂರ್ಣಗೊಂಡಿಲ್ಲ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರಸಕ್ತ ಸಾಲಿನ ಬಿಡುಗಡೆಯಾದ ಯಾವುದೇ ಕಾರಣಕ್ಕೂ ಹಿಂದಿರುಗದಂತೆ ಕ್ರಮವಹಿಸಲು ಸೂಚಿಸಿದರು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡರು ಬಿಲ್ಲು ಪಾವತಿಯಾಗುತ್ತಿಲ್ಲ. ಯಾಕೆ ತಡವಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳ ಬರುತ್ತಿವೆ. ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮವಹಿಸಬೇಕು. ವಿವಿಧ ಇಲಾಖೆಯ ಅಧಿಕಾರಿ ತಾವು ತೆಗೆದುಕೊಳ್ಳುವ ನಿರ್ಣಯಗಳಿಗೆ ಜಿ.ಪಂ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

    ನಂತರ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ನರೇಗಾ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಗ್ರಾಮೀಣ ಕುಡಿಯುವ ನೀರು, ಆರೋಗ್ಯ, ಪಶು ಪಾಲನೆ ಸೇರಿದಂತೆ ಇತರೆ ಇಲಾಖೆ, ಹಾಗೂ ವಿವಿಧ ನಿಗಮಗಳ ಪ್ರಗತಿ ಪರಿಶೀಲನೆ ಮಾಡಿದರು. ಕೃಷಿ ಇಲಾಖೆಯಲ್ಲಿ ಬೀಜ ವಿತರಣೆಯಲ್ಲಿ ಶೇ.77.3 ರಷ್ಟು, ರಾಸಾಯನಿಕ ಗೊಬ್ಬರ ವಿತರಣೆಯಲ್ಲಿ ಶೇ.90.9 ರಷ್ಟು, ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇ.82 ರಷ್ಟು ಸಾಧನೆಯಾಗಿರುವುದಾಗಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸಭೆಗೆ ತಿಳಿಸಿದರು.

    ತೋಟಗಾರಿಕೆ ಇಲಾಖೆಯಲ್ಲಿ ಕೇಂದ್ರ ವಲಯದ ಯೋಜನೆಗಳಲ್ಲಿ ಶೇ.72.91, ರಾಜ್ಯ ವಲಯದಲ್ಲಿ ಶೇ.91.68, ಜಿಲ್ಲಾ ವಲಯದಲ್ಲಿ ಶೇ.87 ರಷ್ಟು ಸಾಧನೆ ಮಾಡಲಾಗಿದೆ. ಸಾಮಾಜಿಕ ಅರಣ್ಯದಲ್ಲಿ ಗಿಡ ಬೆಳೆಸಲು ವಾರ್ಷಿಕ 1683 ಹೆಕ್ಟೇರ್ ಗುರಿಗೆ 1931 ಹೆಕ್ಟೇರ್‌ನಷ್ಟು ಸಾಧಿಸಲಾಗಿದೆ. ರೇಷ್ಮೆ ಇಲಾಖೆಯ ಕಚ್ಚಾ ರೇಷ್ಮೆ ಉತ್ಪಾದನೆ, ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ ಶೇ.29.54 ರಷ್ಟು ಸಾಧನೆ ಮಾಡಲಾಗಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ಗುರಿಗೆ ಅಕ್ಟೋಬರ ಅಂತ್ಯಕ್ಕೆ ಶೇ.100.52 ರಷ್ಟು ಸಾಧನೆ ಮಾಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.

    ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಲೂಕಾವಾರು ಬಿಡುಗಡೆಯಾದ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಿ, ಆಡಳಿತಾತ್ಮಕ ಅನುಮೋದನೆಗೆ ಪಡೆದಿದ್ದು, ಈ ತಿಂಗಳ ಅಂತ್ಯಕ್ಕೆ ಟೆಂಡರ್ ಪ್ರಕ್ರಿಯೇ ಪೂರ್ಣಗೊಂಡು ಕಾಮಗಾರಿ ಪ್ರಾರಂಭವಾಗಬೇಕು. ಪಿಎಂಜಿಎಸ್‌ವೈನಡಿ ನಬಾರ್ಡ ಮಾಲಿಕೆ ರಸ್ತೆ ಅಭಿವೃದ್ಧ್ದಿ ಯೋಜನೆ ಅಡಿಯಲ್ಲಿ 4 ಕಾಮಗಾರಿಗಳ ಪೈಕಿ 3 ಕಾಮಗಾರಿಗಳು ಮುಕ್ತಾಯಗೊಂಡಿರುವುದಾಗಿ ಪಿಆರ್‌ಇಡಿ ಇಇ ಸಭೆಗೆ ತಿಳಿಸಿದರು. ಆರೋಗ್ಯ ಇಲಾಖೆಯ ಎರಡು ಮಕ್ಕಳ ಸೂತ್ರದಲ್ಲಿ ಶೇ.55, ವಿವಿಧ ಲಸಿಕೆ ಕಾರ್ಯಕ್ರಮದಲ್ಲಿ ಶೇ.100 ರಷ್ಟು ಸಾಧನೆ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.

    ಸಭೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಬಸವರಾಜ ಖೋತ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಮೇಟಿ, ಜಿ.ಪಂ ಸಿಇಒ ಟಿ.ಭೂಬಾಲನ, ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಎಸ್.ಸಿ.ಉಕ್ಕಲಿ, ಯೋಜನಾ ನಿರ್ದೇಶಕ ಎಂ.ವಿ.ಚೆಳಗೇರಿ, ಮುಖ್ಯ ಯೋಜನಾಧಿಕಾರಿ ಪ್ರಭು ಮಾನೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts