ಕಳಸ: ತಾಲೂಕಿನಲ್ಲಿ ಶುಕ್ರವಾರ ಮಳೆ ಸ್ವಲ್ಪ ಕ್ಷೀಣಿಸಿದೆ. ಗುರುವಾರ ಬೆಳಗ್ಗೆ ಅಬ್ಬರಿಸಿದ ವರುಣ ಮಧ್ಯಾಹ್ನ ಸ್ವಲ್ಪ ಕ್ಷೀಣಿಸಿ ಶುಕ್ರವಾರವೂ ಮುಂದುವರಿಯಿತು.
ತುಂಬಿ ಹರಿಯುತ್ತಿದ್ದ ಭದ್ರೆಯ ನೀರಿನ ಮಟ್ಟ ಸ್ವಲ್ಪ ತಗ್ಗಿದೆ. ಕಳಸದ ಕಗ್ಗನಳ್ಳ ಸಮೀಪ ಭದ್ರಾ ನದಿ ದಾಟಲು ಗ್ರಾಮಸ್ಥರೇ ನಿರ್ಮಿಸಿದ್ದ ಕಾಲುಸಂಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇಡಕಣಿ ಗ್ರಾಮದ ನಾಗನಮಕ್ಕಿ ಎಂಬಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸ್ಥಗಿತಗೊಂಡಿದೆ. ಕುದುರೆಮುಖದ ಕೆಂಕನಕೊಂಡ ಎಂಬಲ್ಲಿ ಗುರುವಾರ ರಾತ್ರಿ ಮರ ಬಿದ್ದು ಕೆಲ ಕಾಲ ರಸ್ತೆ ಸಂಚಾರ ಕಡಿತಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ನೀಡಲಾಗಿತ್ತು.