ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕು ತಗುಲಿದ್ದ ಮೂವರು ಮಹಿಳೆಯರು ಸೇರಿ ಒಟ್ಟು ಐವರು ಗುಣಮುಖರಾಗಿದ್ದು, ಮಂಗಳವಾರ ಬಿಡುಗಡೆಗೊಂಡಿದ್ದಾರೆ. ರಾಜಸ್ಥಾನ, ದೆಹಲಿ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡ ಹಿನ್ನೆಲೆ ಹೊಂದಿರುವವರು ಸೇರಿ ಜಿಲ್ಲೆಯಲ್ಲಿ ಒಟ್ಟು 7,915ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
ನಗರದ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಪಿ-482, ಪಿ-485, ಪಿ-486, ಪಿ-487, ಪಿ-494 ಸೇರಿ ಒಟ್ಟು ಐದು ಸೋಂಕಿತರು ಬಿಡುಗಡೆಗೊಂಡಿದ್ದಾರೆ ಎಂದು ಬಿಮ್ಸ್ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ವಸತಿ ನಿಲಯಗಳಲ್ಲಿ ಕ್ವಾರಂಟೈನ್: ರಾಜಸ್ಥಾನದ ಅಜ್ಮೀರ್ನಿಂದ ಮರಳಿದ 22 ಜನರಿಗೆ ಈಗಾಗಲೇ ಸೋಂಕು ದೃಢಪಟ್ಟಿದೆ. ಅಲ್ಲದೆ, ಈಗಾಗಲೇ ನೆರೆಯ ರಾಜ್ಯ ಸೇರಿ ಬೆಂಗಳೂರಿನಿಂದ ಜಿಲ್ಲೆಗೆ 2,700ಕ್ಕೂ ಅಧಿಕ ಜನರು ಆಗಮಿಸಿದ್ದಾರೆ. ಅದರಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಇವರೆಲ್ಲರ ಆರೋಗ್ಯದ ಮೇಲೆ ನಿಗಾ ವಹಿಸಲು ಸ್ಥಳೀಯ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.
ಆಲ್ಬಮ್ ಮಾತ್ರೆ ವಿತರಣೆ: ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಕುಟುಂಬದವರಿಗೆ ಮಗಳವಾರ ಆಯುಷ್ ಇಲಾಖೆಯಿಂದ ಅನುಮೋದಿತ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಮ್ ಆಲ್ಬಮ್-30 ಎಂಬ ಮಾತ್ರೆಗಳನ್ನು ವಾರ್ತಾ ಇಲಾಖೆಯ ಸಭಾಂಗಣದಲ್ಲಿ ವಿತರಿಸಲಾಯಿತು.
ಭರತೇಶ ಹೋಮಿಯೋಪಥಿಕ್, ಶಿವಬಸವ ಜ್ಯೋತಿ ಹೋಮಿಯೋಪಥಿಕ್, ಎ.ಎಂ. ಶೇಖ್ ಹೋಮಿಯೋಪಥಿಕ್ ಹಾಗೂ ಕೆಎಲ್ಇ ಹೋಮಿಯೋಪಥಿಕ್ ಮಹಾವಿದ್ಯಾಲಯಗಳು, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹೋಮಿಯೋಪಥಿಕ್ ಅಸೋಸಿಯೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಮಾತ್ರೆ ವಿತರಣೆ ಮಾಡಲಾಯಿತು. ಪ್ರಾಚಾರ್ಯರಾದ ಡಾ. ಎಸ್.ಎಂ. ಉಡಚಣಕರ, ಡಾ.ಶ್ರೀಕಾಂತ ಕೊಂಕಣಿ, ಡಾ.ಆನಂದ ಹೊಸೂರ, ಡಾ.ಮೂಗಿ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ದೊಡವಾಡ, ಡಾ. ಸುಣಧಾಳ ಇತರರು ಇದ್ದರು.