ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಬೈರಸಂದ್ರದಲ್ಲಿ ನಡೆದ ದೊಂಬಿ ಪೂರ್ವನಿಯೋಜಿತವಾಗಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಜೈಲಿಗಟ್ಟಬೇಕು. ಗಲಭೆಕೋರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸವಲತ್ತುಗಳನ್ನು ಕಡಿತಗೊಳಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಗಲಭೆ ಕುರಿತು ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಒಂದು ಕೋಮಿನ ನೂರಾರು ಜನರು ಗುಂಪುಗೂಡಿ ದಾಂಧಲೆ ನಡೆಸಿದ್ದರೂ ಶಾಂತಿ ಸಭೆ ಕರೆಯಬೇಕೆಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಲಹೆ ಅರ್ಥಹೀನ ಎಂದು ತಳ್ಳಿಹಾಕಿದರು.
ಇದನ್ನೂ ಓದಿರಿ ಕಾಂಗ್ರೆಸ್ ಮುಖಂಡನೇ ಡಿಜೆ ಹಳ್ಳಿ ಗಲಭೆಯ ಕಿಂಗ್ಪಿನ್! ಮನೆಯಲ್ಲೇ ಕೂತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿಸಿದ
ರಾಜ್ಯ ಮತ್ತು ಸರ್ಕಾರಕ್ಕೆ ಮಸಿ ಬಳಿಯಲು, ಕೋಮು ಸಂಘರ್ಷ ಸೃಷ್ಟಿಸುವ ಪಿತೂರಿಯಿಂದ ಗಲಭೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಘಟನೆ ಬಗ್ಗೆ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಸರ್ಕಾರ ಮತ್ತು ರಾಜ್ಯದ ಜನತೆ ಗಮನಿಸುತ್ತಿದ್ದು, ಕಾಂಗ್ರೆಸ್ ಓಲೈಕೆ ನೀತಿ ಅನುಸರಿಸುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಕುಟುಕಿದರು.
ಬೆಂಗಳೂರಿನಲ್ಲಿ ಗಲಭೆ ನಡೆಸಿದ ಪುಂಡರಿಗೆ ಸರ್ಕಾರದ ಯಾವುದೇ ಸವಲತ್ತುಗಳು ಸಿಗದಂತೆ ಮಾಡಬೇಕು. ಗಲಭೆಯಿಂದ ಉಂಟಾದ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಬೇಕು ಎಂಬ ಸಲಹೆ ಮತ್ತು ಆಗ್ರಹ ದಟ್ಟವಾಗಿದೆ. ಈ ನಡುವೆ ಸಿಎಂ ಅವರ ಪುತ್ರ ವಿಜಯೇಂದ್ರರ ಹೇಳಿಕೆ ಮತ್ತಷ್ಟು ಮಹತ್ವ ಪಡೆದಿದೆ.