ಬೆಂಗಳೂರು: ಕರೊನಾ ಸೋಂಕಿಗೆ ಮದ್ದು ಕಂಡುಹಿಡಿಯುವ ಆಯುಷ್ ಸಚಿವಾಲಯ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್) ಪ್ರಯತ್ನ ಯಶಸ್ವಿಯಾಗುವುದು ಬಹುತೇಕ ನಿಶ್ಚಿತ ಎಂದು ಆಯುರ್ವೇದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆಯುಷ್ ಸಚಿವಾಲಯ ಮತ್ತು ಸಿಎಸ್ಐಆರ್ ಅಶ್ವಗಂಧ, ಯಷ್ಟಿಮಧು (ಮುಲೇತಿ), ಗುಡುಚಿ ಮತ್ತು ಪಿಪ್ಪಾಲಿ (ಗಿಲಾಯ್) ಹಾಗೂ ಆಯುಷ್ 64ರ (ಮಲೇರಿಯಾ ಚಿಕಿತ್ಸೆಗಾಗಿ ಸಿದ್ಧಪಡಿಸಿರುವ ಔಷಧ) ವಿವಿಧ ಕಾಂಬಿನೇಷನ್ಗಳ ಕ್ಲಿನಿಕಲ್ ಪರೀಕ್ಷೆಯನ್ನು ಮುಂದಿನ ವಾರದಿಂದ ಕೈಗೊಳ್ಳುವುದಾಗಿ ಸಿಎಸ್ಐಆರ್ನ ಪ್ರಧಾನ ನಿರ್ದೇಶಕ ಶೇಖರ್ ಮಾಂಡೆ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ್ ಎ.ಎಸ್, ಈ ಕಾಂಬಿನೇಷನ್ಗಳ ಕ್ಲಿನಿಕಲ್ ಪರೀಕ್ಷೆ ಯಶಸ್ವಿಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರೊನಾಕ್ಕೆ ಸಿದ್ಧವಾಗಿದೆ ಆಯುರ್ವೇದದ 4 ಮದ್ದು; ಕ್ಲಿನಿಕಲ್ ಪ್ರಯೋಗಕ್ಕೆ ಸಿದ್ಧತೆ
ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿರುವ ಅವರು, ಆಯುರ್ವೇದ ಶಾಸ್ತ್ರದ ಪ್ರಕಾರ ಅಶ್ವಗಂಧ ಅತ್ಯುತ್ತಮ ರಸಾಯನ, ಬಲವರ್ಧಕ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹಿರೇಮದ್ದಿನ ಬೇರು. ಇದು ಎಚ್ಸಿಕ್ಯೂಗೆ (ಹೈಡ್ರಾಕ್ಸಿ ಕ್ಲೋರೋಕ್ವೀನ್) ಪರ್ಯಾಯವಾಗಿ ಶರೀರದ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುವ ಅತ್ಯಮೂಲ್ಯ ಗುಣವನ್ನು ಹೊಂದಿದೆ. ಹಾಗಾಗಿ, ಕೋವಿಡ್ 19ಗೆ ಕಾರಣವಾಗುವ ಕರೊನಾ ವೈರಾಣು ವಿರುದ್ಧ ಹೋರಾಡಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಗುಡುಚಿ ಹೆಸರೇ ಸೂಚಿಸುಂತೆ ಅತ್ಯದ್ಭುತ ಜ್ವರಗ್ನ, ದೀಪನ, ವಾಚನ ಮತ್ತು ರಸಾಯನವಾಗಿದೆ. ಗುಡುಚಿ ಇಲ್ಲದ ಜ್ವರಗ್ನಗಳು ಆಯುರ್ವೇದದಲ್ಲಿ ವಿರಳ. ಅಲ್ಲದೆ, ವೈರಾಣು ಸೋಂಕಿನಿಂದ ಉಂಟಾಗುವ ವಿವಿಧ ಲಕ್ಷಣಗಳಿಗೆ ಗುಡುಚಿ ರಾಮಬಾಣ ಎನ್ನುವುದರಲ್ಲಿ ಎರಡು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಪಿಪ್ಪಲಿ. ಇದು ಹಿಪ್ಪಲಿ ಎಂಬ ತ್ರಿಕಟು ವರ್ಗದಲ್ಲಿ ಬಳಸಲ್ಪಡುವ ಕಫಗ್ನ, ಕಾಸಹರ, ಶ್ವಾರಹರ ಮತ್ತು ಅಗ್ನಿಮಾಂದ ನಿವಾರಕವಾಗಿದೆ. ಇದು ಪುನರಾವರ್ತಿತ ಜ್ವರ, ವಿಷಮಜ್ವರ ಇತ್ಯಾದಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ವೈರಾಣು ಸೋಂಕಿನಿಂದ ಉಂಟಾಗುವ ನೆಗಡಿ, ಕೆಮ್ಮು, ಕಫ ಇತ್ಯಾದಿ ಲಕ್ಷಣಗಳನ್ನು ನಿವಾರಿಸುವಲ್ಲಿ ಇದು ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ಯಷ್ಟಿಮಧು ಎಂದರೆ ಜೇಷ್ಠಮಧು. ಇದು ಗಂಟಲಿಗೆ ಸಂಬಂಧಿಸಿದ ರೋಗಗಳಾದ ಗಲಗ್ರಹ, ಗಂಟಲು ನೋವು, ಗಂಟಲು ಬಾವು, ನೆಗಡಿ, ಕೆಮ್ಮು, ಕಫ ಇತ್ಯಾದಿ ಲಕ್ಷಣಗಳಿಗೆ ಅತ್ಯಮೂಲ್ಯ ಔಷಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಅಯುಷ್ ಸಚಿವಾಲಯ ಮತ್ತು ಸಿಎಸ್ಐಆರ್ ಕರೊನಾ ಸೋಂಕಿನ ಚಿಕಿತ್ಸೆಗೆ ಸಿದ್ಧಪಡಿಸಿರುವ ನಾಲ್ಕು ಔಷಧಗಳ ಪ್ರಯೋಗ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಡಾ. ಪ್ರಶಾಂತ್ ಎ.ಎಸ್. ಪುನರುಚ್ಚರಿಸಿದ್ದಾರೆ.
ಪಾಕ್ ಸೇನೆಯ ಬೇಡಿಕೆ ಕೇಳಿ ಬೆಚ್ಚಿಬಿದ್ದ ಪ್ರಧಾನಿ ಇಮ್ರಾನ್!