ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯನೂರು ಮಂಜುನಾಥ್ ಅವರು ಕೊನೆಗೂ ರಾಜೀನಾಮೆ ಘೋಷಿಸಿದ್ದಾರೆ. ಇವತ್ತೆ ಹುಬ್ಬಳ್ಳಿಗೆ ತೆರಳಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
“ರಾಜೀನಾಮೆ ನೀಡುವ ಮುನ್ನ ಪದವೀಧರ ಮತದಾರರ ಅನುಮತಿ ಪಡೆದಿದ್ದೇನೆ’
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ಇವತ್ತು ಮಧ್ಯಾಹ್ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಮಯ ನೀಡಿದ್ದಾರೆ. ಹುಬ್ಬಳ್ಳಿಗೆ ತೆರಳಿ ರಾಜೀನಾಮೆ ನೀಡಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಾಜೀನಾಮೆ ಸಲ್ಲಿಸಲು ಪದವೀಧರ ಕ್ಷೇತ್ರದ ಮತದಾರರ ಅನುಮತಿ ಪಡೆದಿದ್ದೇನೆ. ಅವರೆಲ್ಲ ತಮಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.
“ಯಾವ ಪಕ್ಷ ಎನ್ನುವುದು ಇನ್ನೂ ನಿರ್ಧಾರ ಮಾಡಿಲ್ಲ”
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸುವುದು ನಿಜ. ಯಾವ ಪಕ್ಷ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಬುಧವಾರ ಮತ್ತು ಗುರುವಾರ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ಇಂದು ಸಂಜೆ ಯಾವ ಪಕ್ಷ ಎಂಬುದು ಬಹಿರಂಗಗೊಳ್ಳಲಿದೆ ಎಂದರು.
ಈ ಹಿಂದೆ ರಾಜೀನಾಮೆ ಘೋಷಿಸುವುದಾಗಿ ಹೇಳಿದ್ದೆ. ಆ ನಿಲುವಿಗೆ ಬದ್ಧನಾಗಿದ್ದೇನೆ. ಕಾರ್ಮಿಕ, ಶಿಕ್ಷಕರು, ಎನ್ಪಿಎಸ್, ಒಪಿಎಸ್ ವಿಷಯದಲ್ಲಿ ಶಕ್ತಿ ಮೀರಿ ಮೇಲ್ಮನೆಗೆ ಪ್ರಸ್ತಾವನೆ ಮಾಡಿದ್ದೇನೆ. ಫಲಿತಾಂಶ ಪರಿಣಾಮಕಾರಿಯಾಗಿ ಸಿಗಲಿಲ್ಲ. ಎಲ್ಲಿ ಕಾನೂನು ತಯಾರಿಯಾಗುತ್ತಾವೋ ಆ ಕೆಳಮನೆಗೆ ಪ್ರವೇಶ ಮಾಡಲು ಆಸೆ ಪಟ್ಟಿದ್ದೇನೆ ಎಂದರು.