ಪಿರಿಯಾಪಟ್ಟಣ: ಪ್ರತಿಯೊಂದು ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದಲೇ ಸ್ವೀಕರಿಸಬೇಕು ಎಂದು ಪಟ್ಟಣ ನ್ಯಾಯಾಲಯದ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಸಮೀವುಲ್ಲಾ ತಿಳಿಸಿದರು.
ಗಣರಾಜ್ಯೋತ್ಸವ ಅಂಗವಾಗಿ ಪಿರಿಯಾಪಟ್ಟಣ ವಕೀಲರ ಸಂಘದ ವತಿಯಿಂದ ಶುಕ್ರವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಕೀಲ್ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಆಟಗಾರರು ಕ್ರೀಡಾ ಸ್ಫೂರ್ತಿಯೊಂದಿಗೆ ಆಟವಾಡಿದಾಗ ಮಾತ್ರ ನಿಜವಾದ ಕ್ರೀಡೆ ಗೆಲ್ಲಲಿದೆ ಎಂದು ಅಭಿಪ್ರಾಯಪಟ್ಟರು.
ಕ್ರಿಕೆಟ್ ಆಡುವ ಮೂಲಕ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ವೇತಾ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.
ಪಂದ್ಯಾವಳಿಯಲ್ಲಿ ಜಿಲ್ಲೆಯ ಒಟ್ಟು 5 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾವಳಿಯಲ್ಲಿ ಎಚ್.ಡಿ.ಕೋಟೆ ವಕೀಲರ ತಂಡ ಪಿರಿಯಾಪಟ್ಟಣದ ಎಂ.ಜೆ.ಸ್ವಾಮಿ ನೇತೃತ್ವದ ಎ ತಂಡದ ವಿರುದ್ಧ ಜಯಗಳಿಸಿ ಪ್ರಥಮ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ಪಿರಿಯಾಪಟ್ಟಣ ಎ ತಂಡ ದ್ವಿತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರೆ, ಸುದೀಪ್ ನೇತೃತ್ವದ ಪಿರಿಯಾಪಟ್ಟಣ ಬಿ ತಂಡವು ತೃತೀಯ ಸ್ಥಾನ ಪಡೆಯಿತು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಶಂಕರ್, ಖಜಾಂಚಿ ಹರೀಶ್, ನ್ಯಾಯಾಲಯದ ಶಿರಸ್ತೆದಾರ್ ನಾಗೇಶ್, ಎಪಿಪಿ ಶ್ರೀನಾಥ್, ಹಿರಿಯವಕೀಲ ಬಿ.ವಿ.ಜವರೇಗೌಡ, ವಕೀಲರಾದ ಸುಧೀಶ್, ರೂಪ್ ಸಿಂಗ್, ಪ್ರಸನ್ನ, ಹೇಮಂತ್, ದೇವರಾಜ್, ಆದರ್ಶ್, ಶ್ರೀನಿವಾಸ್, ಬೇಬಿ ಮಂಜುಳಾ, ಎಂ.ಸಿ.ಹರೀಶ್, ನಾಗರಾಜ್ ಇತರರು ಭಾಗವಹಿಸಿದ್ದರು.