More

    ನೆಮ್ಮದಿ ಬದುಕಿಗೆ ಅಧ್ಯಾತ್ಮ ಅಗತ್ಯ

    ಕಲಬುರಗಿ: ಇಂದಿನ ಒತ್ತಡದ ಬದುಕಿನಿಂದ ಮಾನವ ಸಾಕಷ್ಟು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಒಂದಿಷ್ಟು ನೆಮ್ಮದಿ ಪಡೆಯಲು ಅಧ್ಯಾತ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ ಅಧ್ಯಕ್ಷ ಪಂ.ಗೋಪಾಲಾಚಾರ್ಯ ಅಕಮಂಚಿ ಸಲಹೆ ನೀಡಿದರು.

    ನ್ಯೂ ರಾಘವೇಂದ್ರ ಕಾಲನಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವಾಹಿನಿಯ ೨೩ನೇ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಾಂತ್ರಿಕ ಬದುಕಿನಲ್ಲಿ ಮನುಷ್ಯ ಒತ್ತಡ, ಖಿನ್ನತೆಗೆ ಒಳಗಾಗುತ್ತಿದ್ದಾನೆ. ಇದರಿಂದ ಹೊರಬರಲು ಧರ್ಮವೊಂದೇ ಮಾರ್ಗ. ಜ್ಞಾನ-ಭಕ್ತಿ-ವೈರಾಗ್ಯವೇ ನಮ್ಮೆಲ್ಲರ ಗುರಿಯಾಗಬೇಕು. ಅಂದಾಗಲೇ ನೈಜ ಸುಖ, ಶಾಂತಿ-ನೆಮ್ಮದಿ ಸಿಗಲಿದೆ. ಇದನ್ನೇ ಹರಿದಾಸ ಸಾಹಿತ್ಯ ಪ್ರತಿಪಾದಿಸುತ್ತದೆ ಎಂದರು.

    ವಿಶ್ವ ಮಧ್ವ ಮಹಾಪರಿಷತ್ ಜಿಲ್ಲಾಧ್ಯಕ್ಷ ಡಿ.ಕೆ. ಕುಲಕರ್ಣಿ ಮಾತನಾಡಿ, ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲಾಗಿದೆ. ೨೩ ವರ್ಷಗಳಿಂದ ಸಂಘಟನೆ ಜತೆಗೆ ಸಮಾಜದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಉತ್ತಮ ಕಾರ್ಯ. ಮಹಿಳೆಯರಿಗೂ ಸಮಾನ ಸ್ಥಾನ ನೀಡಿ ಮುಖ್ಯವಾಹಿನಿಗೆ ತರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಬೆಂಕಿ ಭೀಮಭಟ್ಟ ಮೋತಕಪಲ್ಲಿ ನೇತೃತ್ವದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ರಾಘವೇಂದ್ರ ನಾಡಗೌಡ, ಪ್ರಮುಖರಾದ ಕಲ್ಯಾಣರಾವ ಭಕ್ಷಿ, ಶ್ರೀನಿವಾಸ ಸಿರನೂರಕರ್, ರಾಮಾಚಾರ್ಯ ಮೋಘರೆ, ಬಾಲಕೃಷ್ಣ ಲಾತೂರಕರ್, ರವಿ ಲಾತೂರಕರ್, ವೀರೇಶ ಕುಲಕರ್ಣಿ, ರವೀಂದ್ರ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಮುರಳೀಧರ ಜಿ.ಕರಲಗಿಕರ್, ದಿನಕರರಾವ ಕುಲಕರ್ಣಿ ಅಷ್ಟಗಿ, ಲಕ್ಷ್ಮೀಕಾಂತ ಮೊಹರೀರ್, ಶೇಷಗಿರಿ ಎನ್.ಬೀಡಕರ್ ಇತರರಿದ್ದರು. ಪ್ರೊ.ವ್ಯಾಸರಾಜ ಸಂತೆಕೆಲ್ಲೂರ ನಿರೂಪಣೆ ಮಾಡಿದರು.

    ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ
    ಹಿರಿಯ ಪುರೋಹಿತರಾದ ದತ್ತಾಚಾರ್ಯ ಹೊಗಾಡೆ, ಸುರಪುರದ ಶ್ರೀಶಿಲಾಕುಮಾರ ಶಾಸ್ತ್ರೀ ಅವರಿಗೆ ವಿಪ್ರಶ್ರೀ, ಡಾ.ಉದಯ ಪಾಟೀಲ್ (ಸಾಮಾಜಿಕ ಕ್ಷೇತ್ರ), ಕೆಂಭಾವಿಯ ಹಳ್ಳೇರಾವ ಕುಲಕರ್ಣಿ(ಶಿಕ್ಷಣ), ಶೇಷಗಿರಿ ಹುಣಸಗಿ (ಮಾಧ್ಯಮ) ಅವರಿಗೆ ಶ್ರೀ ಜಗನ್ನಾಥ ವಿಠ್ಠಲ ಹಾಗೂ ದಿ.ಜಾನಕಿಬಾಯಿ ದೇಶಪಾಂಡೆ ಹುಣಸಗಿ ಸ್ಮರಣಾರ್ಥ ಶ್ರೀ ಧ್ಯಾನಾಂಜನೇಯ ಭಜನಾ ಮಂಡಳಿಗೆ `೨೦೨೩-೨೪ರ ಅತ್ಯುತ್ತಮ ಭಜನಾ ಮಂಡಳಿ’ ಪುರಸ್ಕಾರ ನೀಡಲಾಯಿತು. ಸಿದ್ಧಿಮಾರುತಿ ದೇವಸ್ಥಾನದ ಅರ್ಚಕ ಪಂ.ನಾರಾಯಣಾಚಾರ್ಯ ಕಮಲಾಪುರ, ಚಿತ್ತಾಪುರದ ಪ್ರಕಾಶ ಭಟ್ಟ, ಯುವ ಸಂಗೀತ ಕಲಾವಿದ ನಯನಕುಮಾರ್ ಎನ್.ಮಳಖೇಡಕರ್ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

    ಅದ್ದೂರಿ ಮೆರವಣಿಗೆ: ಸಮಾರಂಭಕ್ಕೂ ಮುನ್ನ ಬ್ರಹ್ಮಪುರ ಉತ್ತರಾದಿ ಮಠದಿಂದ ನ್ಯೂ ರಾಘವೇಂದ್ರ ಕಾಲನಿ ಶ್ರೀ ವೆಂಕಟೇಶ್ವರ ದೇವಸ್ಥಾನವರೆಗೆ ಶ್ರೀದೇವಿ-ಭೂದೇವಿ ಸಹಿತ ಶ್ರೀನಿವಾಸ ದೇವರು ಹಾಗೂ ದಾಸರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ದಾರಿಯುದ್ದಕ್ಕೂ ಮಹಿಳೆಯರಿಂದ ಭಜನೆ ನಡೆಯಿತು. ಭಕ್ತರು ದಾಸರ ಪದಗಳನ್ನು ಹಾಡುತ್ತ ಹೆಜ್ಜೆ ಹಾಕಿ ಗಮನಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts