ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್ 2’ ಏಪ್ರಿಲ್ 14ಕ್ಕೆ ಬಿಡುಗಡೆಯಾದ ಮೇಲೆ ಯಾವೊಂದೂ ನಿರೀಕ್ಷಿತ ಚಿತ್ರವಿಲ್ಲ ಎಂದು ಬೇಸರದಲ್ಲಿದ್ದವರಿಗೆ ಕೊನೆಗೂ ಒಂದು ಹೆಸರು ಸಿಕ್ಕಿದೆ. ಈಗಾಗಲೇ ಕಾರಣಾಂತರಗಳಿಂದ ಎರಡು ಬಾರಿ ಮುಂದಕ್ಕೆ ಹೋಗಿದ್ದ ಶರಣ್ ಅಭಿನಯದ ‘ಅವತಾರ ಪುರುಷ’ ಚಿತ್ರವು ಮೇ 6ಕ್ಕೆ ಬಿಡುಗಡೆಯಾಗಲಿದ್ದು, ಈ ಕುರಿತು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, 2021ರ ಮೇ 28ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ 2ನೇ ಅಲೆಯಿಂದ ಅದು ಸಾಧ್ಯವಾಗಲಿಲ್ಲ. ಆ ನಂತರ ಡಿ. 10ಕ್ಕೆ ಚಿತ್ರ ಬಿಡುಗಡೆ ಎಂದು ಘೋಷಿಸಲಾಯಿತು. ಆಗ ಹಲವು ಚಿತ್ರಗಳಿದ್ದರಿಂದ, ಚಿತ್ರವನ್ನು ಮುಂದೂಡಲಾಯಿತು. ಈಗ ಕರೊನಾ ಭಯವಿಲ್ಲ. ಹಾಗಾಗಿ, ಮೇ 06ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ‘ನಾವು ‘ಜೇಮ್್ಸ’, ‘ಕೆಜಿಎಫ್ 2’ ಮತ್ತು ‘ಆರ್ಆರ್ಆರ್’ ಚಿತ್ರಗಳ ಬಿಡುಗಡೆಗೆ ಕಾದಿದ್ದೆವು. ಅವೆಲ್ಲವೂ ಇನ್ನೊಂದು ತಿಂಗಳಲ್ಲಿ ಬಿಡುಗಡೆಯಾಗುತ್ತವೆ. ಹಾಗಾಗಿ, ಮೇ ಮೊದಲ ವಾರದಲ್ಲಿ ನಾವು ಬರಲಿದ್ದೇವೆ. ಮೊದಲ ಭಾಗ ತೆರೆಕಂಡ 3ತಿಂಗಳಲ್ಲಿ ಎರಡನೆಯ ಭಾಗ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ಕೊಡುತ್ತಾರೆ ಪುಷ್ಕರ್. ಸಿಂಪಲ್ ಸುನಿ ಈ ಚಿತ್ರ ನಿರ್ದೇಶಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಅಪ್ಪು ಬೆಳಕು; ಪುನೀತ್ ಜನ್ಮದಿನಂದು ಬೃಹತ್ ನೇತ್ರದಾನ ವಾಗ್ದಾನ ಶಿಬಿರ