ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೌಡಿಗಳ ಹಾವಳಿ ಮಿತಿ ಮೀರುತ್ತಿದೆ. ಪೊಲೀಸ್ ಇಲಾಖೆಯ ಭಯವೇ ಇಲ್ಲದಂತೆ ಪುಡಿ ರೌಡಿಗಳು ವರ್ತಿಸುತ್ತಿದ್ದಾರೆ. ಸಣ್ಣ ಪುಟ್ಟ ಅಂಗಡಿಗಳಿಗೆ ನುಗ್ಗಿ, ಅಲ್ಲಿದ್ದ ವ್ಯಾಪಾರಸ್ಥರನ್ನು ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿರುವ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.
ಇತ್ತೀಚೆಗೆ ಸಿಗರೇಟ್ ಹಣ ಕೇಳಿದಕ್ಕೆ ಬೈಂದೂರಿನ ಅಂಗಡಿ ಹುಡುಗರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ 1.90 ಲಕ್ಷ ರೂ. ಎಗರಿಸಿ, ಪ್ರಾಣಬೆದರಿಕೆ ಹಾಕಿರುವ ಪ್ರಕರಣ ಕುಂದಲಹಳ್ಳಿಗೇಟ್ ಸಮೀಪದ ಕಾಂಡಿಮೆಂಟ್ಸ್ವೊಂದರಲ್ಲಿ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.
ಬಾಣಸವಾಡಿ ಬಳಿ ಇರುವ ಮೀನಿನ ವ್ಯಾಪಾರಿ ಮೇಲೆ, ಸುದೇಶ ಎಂಬಾತ ಲಾಂಗ್ ಬೀಸಿದ್ದಾನೆ. ಒಮ್ಮಿಂದೊಮ್ಮೆಲೆ ಅಂಗಡಿಗೆ ನುಗ್ಗಿದ ಸುದೇಶ, ಅಂಗಡಿಯಲ್ಲಿದ್ದ ವ್ಯಕ್ತಿಯ ಮೇಲೆ ಲಾಂಗ್ ಬೀಸಿದ್ದಾನೆ. ಅದೃಷ್ಟವಶಾತ್ ಅಂಗಡಿಯಲ್ಲಿದ್ದಾತ ಬಚಾವಾಗಿದ್ದಾನೆ. ಇದರಿಂದ ಕೂದಲೆಳೆ ಅಂತರದಲ್ಲಿ ಯಾವುದೇ ದುರ್ಘಟನೆ ಸಂಭವಿಸಿಲ್ಲ.
ಹಪ್ತಾ ವಸೂಲಿಗಾಗಿ ಆರೋಪಿ ಸುದೇಶ್ ಲಾಂಗ್ನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಸದ್ಯ ಈತನ ಕೃತ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.