ಗದಗ: ಅಟಲ್ ಭೂಜಲ ಯೋಜನೆಯ ನೋಡಲ್ ಅಧಿಕಾರಿಗಳ ಕಾರ್ಯಾಲಯದಿಂದ ಕೇಂದ್ರ ಸರ್ಕಾರ ಹಾಗೂ ವಿಶ್ವ ಬ್ಯಾಂಕಿನ ನೆರವಿನ ಪಾಲುದಾರಿಕೆಯಲ್ಲಿ ಗದಗ ಜಿಲ್ಲೆಯಲ್ಲಿ ಅಟಲ್ ಭೂಜಲ್ ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಬುಧವಾರದಂದು ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಲಾಜಾಥಾ ಕಾರ್ಯಕ್ರಮಕ್ಕೆ ರಾಜ್ಯದ ಕಾನೂನು,ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಮಾತನಾಡಿ ಅಂತರ್ಜಲ ಸದ್ಬಳಕೆ, ಪ್ರಕೃತಿ ನಮಗಾಗಿ ಭೂ ಗರ್ಭದಲ್ಲಿ ಭದ್ರವಾಗಿ ಕೂಡಿಟ್ಟಿರುವ “ಜೀವ ಜಲ” ಈ ಜೀವ ಜಲವನ್ನು ಹಿತಮಿತವಾಗಿ ಬಳಸಿದರೆ ಮಾತ್ರ, ಭವಿಷ್ಯದ ಪೀಳಿಗೆಗೂ ಉಳಿಸಬಹುದು.ಅದಕ್ಕಾಗಿ, ಕೊಳವೆಬಾವಿ ಸೇರಿದಂತೆ ಅಂತರ್ಜಲ ಬಳಸಿಕೊಂಡು ನೀರಾವರಿ ಆಧಾರಿತ ಕೃಷಿ ಮಾಡುವವರು ಸೂಕ್ಷ್ಮ ನೀರಾವರಿ ಪದ್ದತಿಗಳಾದ ತುಂತುರು ಮತ್ತು ಹನಿ ನೀರಾವರಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.ಬಳಕೆ ಮಾಡುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಭೂಮಿಗೆ ಮರುಪೂರಣ ಮಾಡಬೇಕಾಗಿರುವುದು ಅತಿ ಅವಶ್ಯಕವಾಗಿರುತ್ತದೆ ಎಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ನಾಗಶೆಟ್ಟಿ ಚಂದ್ರಶೇಖರ್, ಅಟಲ್ ಭೂಜಲ ಯೋಜನೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಇಂಜನೀಯರ್ ರಾಘವೇಂದ್ರ ಎಮ್, ಅಂತರ್ಜಲ ತಜ್ಞರಾದ ದಿನೇಶ ಎಚ್ ಪಾಟೀಲ್, ಕೃಷಿ ತಜ್ಞರಾದ ಶಿವಕುಮಾರ ಟಿ. ಎಚ್. ಮಾಹಿತಿ ಮತ್ತು ಶಿಕ್ಷಣ ಸಂವಹನ ತಜ್ಞರಾದ ಕೋಟ್ರೇಶ ಎಚ್.ಎಮ್.ಮತ್ತು ಜೀವನ ಬೆಳಕು ಕಲಾ ತಂಡದ ನಾಯಕರಾದ ರಾಜಶೇಖರ್ ಹಿರೇಮಠ್ ಹಾಗೂ ಸಂಗಡಿಗರು ಮತ್ತು ಅಟಲ್ ಭೂಜಲ ಯೋಜನೆಯ ಜಿಲ್ಲಾ ಪಾಲುದಾರ ಸಂಸ್ಥೆಯಾದ ಧಾರವಾಡ ನಿವೇದಿತ ಮಹಿಳಾ ವಿವಿದ್ದೊದ್ದೇಶ ಸಂಘದ ಸಿಬ್ಬಂದಿಗಳು ಹಾಜರಿದ್ದರು.