ನವದೆಹಲಿ: ಯೆಸ್ ಬ್ಯಾಂಕ್ ಆರ್ಥಿಕವಾಗಿ ದಿವಾಳಿಯಾಗಿರುವ ಬೆನ್ನಲ್ಲೇ ಆತಂಕಕ್ಕೀಡಾಗಿರುವ ಗ್ರಾಹಕರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಧೈರ್ಯ ತುಂಬಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ನಿಮ್ಮ ಹಣ ಸುರಕ್ಷಿತವಾಗಿರಲಿದೆ ಎಂದು ಯೆಸ್ ಬ್ಯಾಂಕ್ನ ಪ್ರತಿಯೊಬ್ಬ ಠೇವಣಿದಾರರಿಗೆ ನಾನು ಖಚಿತಪಡಿಸಲು ಬಯಸುತ್ತೇನೆ. ನಾನು ನಿರಂತರವಾಗಿ ಆರ್ಬಿಐ ಸಂಪರ್ಕದಲ್ಲಿದ್ದೇನೆ ಎಂದು ನಿರ್ಮಾಲಾ ಸೀತಾರಾಮನ್ ತಿಳಿಸಿದರು.
ಯೆಸ್ ಬ್ಯಾಂಕ್ ಠೇವಣಿದಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಆರ್ಬಿಐ ಗವರ್ನರ್ ನನಗೆ ಖಚಿತ ಭರವಸೆ ನೀಡಿದ್ದಾರೆ. ಆರ್ಬಿಐ ಮತ್ತು ಸರ್ಕಾರ ಎರಡು ಕೂಡ ಯೆಸ್ ಬ್ಯಾಂಕ್ ಸಮಸ್ಯೆಯನ್ನು ವಿವರವಾಗಿ ಪರಿಶೀಲಿಸಲಿದೆ ಎಂದರು.
ಯೆಸ್ ಬ್ಯಾಂಕ್ ಸಮಸ್ಯೆಗೆ ಶೀಘ್ರ ಪರಿಹಾರ ನೀಡಲು ಆರ್ಬಿಐ ಕಾರ್ಯನಿರ್ವಹಿಸುತ್ತಿದೆ. ಠೇವಣಿದಾರು, ಬ್ಯಾಂಕ್ ಮತ್ತು ಆರ್ಥಿಕತೆಯ ಹಿತಾಶಕ್ತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ. 50 ಸಾವಿರ ರೂ. ಒಳಗೆ ವಿತ್ಡ್ರಾ ಮಾಡಿಕೊಳ್ಳಲು ಯೆಸ್ ಬ್ಯಾಂಕ್ ಗ್ರಾಹಕರಿಗೆ ತಕ್ಷಣ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಸುಸ್ಥಿ ಸಾಲಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಯೆಸ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಆಗಿ ಮಾಡಿದೆ. ನಗದು ವಿತ್ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಲಾಗಿದ್ದು, ಸಾವಿರಾರು ಗ್ರಾಹಕರು ಹಣ ತೆಗದುಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಷೇರು ಮಾರುಕಟ್ಟೆಯಲ್ಲೂ ಯೆಸ್ ಬ್ಯಾಂಕ್ ಪಾಲು ತೀವ್ರ ಕುಸಿತ ಕಂಡಿದೆ. (ಏಜೆನ್ಸೀಸ್)