ಕಡಬ: ರೆಂಜಿಲಾಡಿ ಗ್ರಾಮದ ಉಳಿಪ್ಪು ಎಂಬಲ್ಲಿ ಮದುವೆ ಔತಣಕೂಟದ ಕಾರ್ಯಕ್ರಮದ ಮನೆಯಲ್ಲಿ ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಬಾತ್ರೂಮ್ನ ಕಿಟಕಿಯಿಂದ ಯುವಕನೊಬ್ಬ ವಿಡಿಯೋ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಘಟನೆಯ ಮರುದಿನ ಯುವಕನ ಮನೆಗೆ ತೆರಳಿ ವಿಡಿಯೋ ಡಿಲೀಟ್ ಮಾಡಬೇಕು ಎಂದು ಆಗ್ರಹಿಸಿದಾಗ ಆರೋಪಿ ಯುವಕ ಹಾಗೂ ಅವನ ಸಂಗಡಿಗರು ಹಲ್ಲೆ ಮಾಡಿದ್ದಾರೆ ಎಂದು ಕಡಬ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ರೆಂಜಿಲಾಡಿ ಗ್ರಾಮದ ಸಂಕೇಶ ನಿವಾಸಿ ಪುರುಷೋತ್ತಮ ಎಂಬುವರ ಪುತ್ರಿ ರೇಷ್ಮಾ ಎಂಬುವರು ನೀಡಿದ ದೂರಿನಲ್ಲಿ ತಿಳಿಸಿರುವಂತೆ, ಏ.28ರಂದು ದೊಡ್ಡಪ್ಪನ ಮಗನ ಮದುವೆ ಔತಣಕೂಟಕ್ಕೆ ಸಂಬಂಧಿಕರಾದ ಶೈನಿ, ಭುವನ, ಉದಯ, ಲೋಕೇಶ್, ಅಶ್ಮಿತ್, ಹರ್ಷಿತ, ಜಿತೇಶ್, ಜನರ್ದನ, ಅಶ್ವತ್ಥ್ ಎಂಬುವರೊಂದಿಗೆ ಹೋಗಿದ್ದು, ಅಲ್ಲಿ ಜತೆಗಿದ್ದ ಯುವತಿಯೊಬ್ಬರು ಸ್ನಾನ ಮಾಡುತ್ತಿದ್ದಾಗ ದಿವಾಕರ ಎಂಬವರು ಬಾತ್ರೂಂ ಕಿಟಕಿಯಿಂದ ವಿಡಿಯೋ ಮಾಡಿದ್ದಾನೆ.
ಈ ವಿಚಾರಕ್ಕೆ ಸಂಬಂಧಿಸಿ ಸಂಬಂಧಿಕರಾದ ಭುವನ, ಸ್ವಾತಿ, ಶೈನಿ, ಧನಂಜಯ, ಉದಯ, ನಿಶಾಂತ್, ಲೋಕೇಶ್, ಅಶ್ಮಿತ್, ಜನಾರ್ದನ, ರಮೇಶ್ ಎಂಬುವರೊಂದಿಗೆ 2 ಕಾರುಗಳಲ್ಲಿ ದಿವಾಕರನ ಮನೆಗೆ ಹೋಗಿ ವಿಡಿಯೋ ಡಿಲೀಟ್ ಮಾಡುವಂತೆ ಹೇಳಿದಾಗ ದಿವಾಕರ ಚೂರಿ ಹಿಡಿದುಕೊಂಡು ಮೊಬೈಲ್ ಕೊಡುವುದಿಲ್ಲ ನೀವು ಇಲ್ಲಿಂದ ಹೋಗಿ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.
ದಿವಾಕರ, ಭವ್ಯಶ್ರೀ ಹಾಗೂ ಶಿವಪ್ಪ ಎಂಬುವರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಬಳಿಕ ಉದಯ, ನಿಶಾಂತ್ರವರು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲು ಆಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.