ಜೈಪುರ: ದೇಶದಲ್ಲಿ ಜನರು ತಮ್ಮ ಧಾರ್ವಿುಕ ನಂಬಿಕೆಗಳನ್ನು ಆಚರಿಸುವುದು ಕಾಂಗ್ರೆಸ್ ಆಡಳಿತದಡಿ ಕಷ್ಟವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮಂಗಳವಾರ ರಾಜಸ್ಥಾನದ ಟೊಂಕ್ನಲ್ಲಿ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ಆಡಳಿತದಡಿ ಹನುಮಾನ್ ಚಾಲೀಸಾ ಕೇಳುವುದು ಕೂಡ ಅಪರಾಧ ಆಗಲಿದೆ’ ಎಂದು ಹೇಳಿದರು. ದೇಶ ಹನುಮಾನ್ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವುದು ಗಮನಾರ್ಹವಾಗಿದೆ.
ದೇಶದ ಸಂಪತ್ತನ್ನು ಕಿತ್ತುಕೊಂಡು ಕೆಲವು ‘ಆಯ್ದ’ ಜನರಿಗೆ ಮರುಹಂಚಿಕೆ ಮಾಡಲು ಕಾಂಗ್ರೆಸ್ ದೊಡ್ಡ ಪಿತೂರಿಯನ್ನೇ ಹೆಣೆದಿದೆ ಎಂದು ರಾಜಸ್ಥಾನದ ಬನ್ಸ್ ವಾರಾದಲ್ಲಿ ಭಾನುವಾರ ಮಾಡಿದ್ದ ಆರೋಪವನ್ನು ಮೋದಿ ಪುನರುಚ್ಚರಿಸಿದರು. ತಮ್ಮ ಈ ಹೇಳಿಕೆಯಿಂದ ಕಾಂಗ್ರೆಸ್ ಮತ್ತು ವಿಪಕ್ಷಗಳ ಮೈತ್ರಿಕೂಟ ಸಿಟ್ಟಾಗಿದೆ. ಅವರು ಹೋದಲ್ಲೆಲ್ಲ ಮೋದಿಯನ್ನು ನಿಂದಿಸಲು ಆರಂಭಿಸಿದ್ದಾರೆ ಎಂದು ಹೇಳಿದರು.
ನಿಮ್ಮ ಸಂಪತ್ತನ್ನು ಕಸಿದುಕೊಂಡು ಅದನ್ನು ಆಯ್ದ ಕೆಲವೇ ಜನರಿಗೆ ವಿತರಿಸಲು ಕಾಂಗ್ರೆಸ್ ಆಳವಾದ ಸಂಚನ್ನು ಮಾಡುತ್ತಿದೆಯೆಂಬ ಸತ್ಯ ನಾನು ದೇಶದ ಮುಂದಿಟ್ಟಿದ್ದೇನೆ ಎಂದು ಟೊಂಕ್ ರ್ಯಾಲಿಯಲ್ಲಿ ಮೋದಿ ಹೇಳಿದರು. ಕಾಂಗ್ರೆಸ್ನ ತುಷ್ಠೀಕರಣ ರಾಜಕಾರಣದ ಈ ಮತ ಬ್ಯಾಂಕ್ ರಾಜಕೀಯವನ್ನು ತಾವು ಎರಡು-ಮೂರು ದಿನದ ಹಿಂದೆ ಅನಾವರಣಗೊಳಿಸಿದ್ದಾಗಿ ಮೋದಿ ನೆನಪಿಸಿದರು. ಸತ್ಯಕ್ಕೆ ಕಾಂಗ್ರೆಸ್ ಹೆದರುವುದೇಕೆ ಎಂದು ಪ್ರಶ್ನಿಸಿದ ಪ್ರಧಾನಿ, ಅದು ತನ್ನ ನೀತಿಗಳನ್ನು ಅಡಗಿಸಿಡುವುದೇಕೆ? ಎಂದೂ ಕೇಳಿದರು.
ಧರ್ವಧಾರಿತ ಮೀಸಲಾತಿ: ಧರ್ಮದ ಆಧಾರದಲ್ಲಿ ಮೀಸಲಾತಿ ವಿಸ್ತರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದೂ ಹೇಳಿದ ಮೋದಿ, ಅದನ್ನು ಮುಸ್ಲಿಮರಿಗೆ ನೀಡಲಾಗುತ್ತದೆ ಎಂದು ಆಪಾದಿಸಿದರು. ಕಾಂಗ್ರೆಸ್ ಪಕ್ಷ 2004ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ಆಂಧ್ರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮೀಸಲಾತಿ ಕಡಿಮೆ ಮಾಡಿ ಅದನ್ನು ಮುಸ್ಲಿಮರಿಗೆ ನೀಡುವುದು ಅದರ ಆದ್ಯತೆಯಾಗಿತ್ತು ಎಂದು ಪ್ರಧಾನಿ ಹೇಳಿದರು.
‘ದಲಿತರು ಹಾಗೂ ಹಿಂದುಳಿದ ಬುಡಕಟ್ಟು ಜನರ ಮೀಸಲಾತಿ ಕೊನೆಗೊಳ್ಳುವುದಿಲ್ಲ ಅಥವಾ ಅದನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಅವಕಾಶ ನೀಡುವುದಿಲ್ಲ ಎಂದು ಮುಕ್ತ ಹೃದಯದಿಂದ ಗ್ಯಾರಂಟಿ ನೀಡುತ್ತಿದ್ದೇನೆ’ ಎಂದೂ ಘೋಷಿಸಿದರು. ತಾವು ಸಂವಿಧಾನವನ್ನು ಅರ್ಥ ಮಾಡಿ ಕೊಂಡಿರುವುದಾಗಿ ಪ್ರತಿಪಾದಿಸಿದ ಮೋದಿ, ತಾವು ಅಂಬೇಡ್ಕರ್ ಅವರನ್ನು ಆರಾಧಿಸುವ ವ್ಯಕ್ತಿಯೆಂದು ಹೇಳಿದರು.
ದೇಶ ವಿಭಜನೆಯ ಷಡ್ಯಂತ್ರ: ಕರಾವಳಿ ರಾಜ್ಯದ ಮೇಲೆ ಸಂವಿಧಾನವನ್ನು ಹೇರಲಾಗಿದೆ ಎಂದು ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರಿಯಾಟೋ ಫೆರ್ನಾಂಡಿಸ್ ಸೋಮವಾರ ಹೇಳಿರುವುದನ್ನು ಛತ್ತೀಸ್ಗಢದ ಶಕ್ತಿ ಜಿಲ್ಲೆಯ ರ್ಯಾಲಿಯಲ್ಲಿ ಪ್ರಸ್ತಾಪಿಸಿದ ಮೋದಿ, ಇದು ದೇಶವನ್ನು ಒಡೆಯುವ ಒಂದು ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.
ಸಂಶೋಧನೆ, ಆವಿಷ್ಕಾರಕ್ಕೆ ಆದ್ಯತೆ: ಸಂಶೋಧನೆ, ಕಲಿಕೆ ಮತ್ತು ಆವಿಷ್ಕಾರಕ್ಕೆ ತಮ್ಮ ಸರ್ಕಾರ ದೊಡ್ಡ ರೀತಿಯಲ್ಲಿ ಗಮನ ಹರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಭಾರತೀಯ ವಿಶ್ವ ವಿದ್ಯಾಲಯಗಳ ಕಾರ್ಯಕ್ಷಮತೆ ಸುಧಾರಿಸಿರುವುದನ್ನು ಕ್ವಾಕ್ವಾರೆಲಿ ಸೈಮಂಡ್ಸ್ (ಕ್ಯೂಎಸ್) ಅಧ್ಯಕ್ಷರು ಶ್ಲಾಘಿಸಿದ ಮರುದಿನವೇ ಪ್ರಧಾನಿ ಮೋದಿ ಅದಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ಸರ್ಕಾರದ ಕ್ರಮವನ್ನು ಎಕ್ಸ್ನಲ್ಲಿ ವಿವರಿಸಿದ್ದಾರೆ. ಜಿ-20 ದೇಶಗಳ ಪೈಕಿ ಭಾರತೀಯ ವಿವಿಗಳು ಉತ್ತಮ ಸಾಧನೆ ತೋರುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವು ತಮ್ಮ ಸರಾಸರಿ ರ್ಯಾಂಕಿಂಗ್ನಲ್ಲಿ ಶೇ.14ರಷ್ಟು ಗಣನೀಯ ಸುಧಾರಣೆ ತೋರಿವೆ ಎಂದು ಕ್ಯೂಎಸ್ ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಹೇಳಿತ್ತು.
ಮೋದಿ ಸಮಾಜ ಒಡೆಯಲ್ಲ
ನೊಯ್ಡಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಯಾವತ್ತೂ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ, ಅವರು ಸಮಾಜ ಒಡೆಯುವ ಯೋಚನೆ ಮಾಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮನಮೋಹನ್ ಸಿಂಗ್ 2006ರಲ್ಲಿ ಪ್ರಧಾನಿ ಆಗಿದ್ದಾಗ ಮುಸ್ಲಿಮರಿಗೆ ಮೀಸಲಾತಿ ವಿಸ್ತರಿಸುವ ಕುರಿತು ಮಾತಾಡಿದ್ದನ್ನು ಉಲ್ಲೇಖಿಸಿ ಅವರು ಮಾತನಾಡಿದರು.
ಗ್ರೇಟರ್ ನೊಯ್ಡಾದಲ್ಲಿ ಮಂಗಳ ವಾರ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾದ ಸಿಂಗ್, ವಿಪಕ್ಷಗಳು ಪ್ರಧಾನಿ ಮೋದಿ ಕುರಿತು ಜನರಲ್ಲಿ ಪ್ರಶ್ನೆಗಳು ಮೂಡುವಂತೆ ಮಾಡಲು ಪ್ರಯತ್ನಿಸುತ್ತಿವೆ ಎಂದರು. ನಾನು ಮೋದಿ ಜತೆ ದೀರ್ಘಕಾಲದ ಉತ್ತಮ ಸಂಬಂಧ ಹೊಂದಿದ್ದೇನೆ. ಅವರು ಯಾವತ್ತೂ ಹಿಂದು, ಮುಸ್ಲಿಂ, ಕ್ರೖೆಸ್ತ ಎಂದು ರಾಜಕಾರಣ ಮಾಡಿಲ್ಲ. ಮೋದಿ ಇತ್ತೀಚೆಗೆ ಏನೇ ಹೇಳಿದ್ದರೂ ಅದು ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಇದ್ದಿದ್ದೇ ಎಂದು ಪ್ರಧಾನಿಯವರ ಇತ್ತೀಚಿನ ಭಾಷಣಗಳನ್ನು ಪ್ರಸ್ತಾಪಿಸಿದರು. ಅದು ಅವರ ಪ್ರಣಾಳಿಕೆಯಲ್ಲೇ ಇದೆ ಎಂದಾದ ಮೇಲೆ ವಿಪಕ್ಷಗಳವರು ಅದನ್ನು ಅಲ್ಲಗಳೆಯುವುದಾದರೂ ಏಕೆ? ಎಂದು ರಾಜನಾಥ್ ಸಿಂಗ್ ಹೇಳಿದರು.
ಉದ್ಯಮದ ಕೇಂದ್ರ: ನೊಯ್ಡಾ ಒಂದು ಕಾಲದಲ್ಲಿ ಭ್ರಷ್ಟಾಚಾರದ ಕೇಂದ್ರವಾಗಿತ್ತು, ಆದರೆ ಇದೀಗ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದಿಂದಾಗಿ ಉದ್ಯಮ ಕೇಂದ್ರವಾಗಿ ಪರಿವರ್ತನೆ ಆಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಮೊದಲು ಈ ಪ್ರದೇಶ ಕ್ರಿಮಿನಲ್ಗಳ ಹಿಡಿತದಲ್ಲಿದ್ದು, ಅವರು ಜನರನ್ನು ಹೊರದಬ್ಬಲು ಯತ್ನಿಸುತ್ತಿದ್ದರು. ಆದರೆ ಈಗ ಅವೆಲ್ಲ ಮುಗಿದ ವಿಷಯಗಳಾಗಿವೆ ಎಂದು ಸಿಂಗ್ ಹೇಳಿದರು.
ದೇಶದಲ್ಲಿ ಷರಿಯಾ ಕಾನೂನು ತರಲು ಕಾಂಗ್ರೆಸ್ ಯತ್ನ
ಅಮ್ರೋಹ/ಬಾಘ್ಪತ್: ಜನರ ಆಸ್ತಿ ಮರು ಹಂಚಿಕೆ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್, ದೇಶದಲ್ಲಿ ಷರಿಯಾ ಕಾನೂನು ಅನುಷ್ಠಾನಕ್ಕೆ ತರುವ ಉದ್ದೇಶವನ್ನು ಕೂಡ ಅದರಲ್ಲಿ ವ್ಯಕ್ತಪಡಿಸಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಉತ್ತರಪ್ರದೇಶದ ಅಮ್ರೋಹದಲ್ಲಿ ಮಂಗಳವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಧಿಕಾರಕ್ಕೆ ಬಂದರೆ ಅವರು ಷರಿಯಾ ಕಾನೂನು ತರಲಿರುವುದನ್ನು ಹೇಳಿರುವುದು ಗೊತ್ತಾಗುತ್ತದೆ ಎಂದರು. ಈ ದೇಶ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೇಲೆ ನಡೆಯ ಬೇಕೋ ಅಥವಾ ಷರಿಯಾ ಕಾನೂನಿನ ಮೇಲೆ ನಡೆಯಬೇಕೋ? ನೀವೇ ಹೇಳಿ ಎಂದು ಹೇಳಿದರು.
ಶೀಘ್ರವೇ ಭ್ರಷ್ಟಾಚಾರ ವಿರುದ್ಧದ ಮೋದಿ ಕ್ರಮ ತೀವ್ರ
ತಿಕಂಗಢ: ಐಎನ್ಡಿಐಎ ಮೈತ್ರಿಕೂಟವು ಕುಟುಂಬ ಹಾಗೂ ಭ್ರಷ್ಟ ಪಕ್ಷಗಳು ಗುಂಪು ಎಂದು ಕರೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು. ಮಧ್ಯಪ್ರದೇಶದ ತಿಕಂಗಢ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಅವರು, ಪ್ರಧಾನಿ ಮೋದಿ ಅಭಿವೃದ್ಧಿ ಯಲ್ಲಿ ತೊಡಗಿದ್ದರೆ, ಐಎನ್ಡಿಐಎ ಮೈತ್ರಿಕೂಟದ ಮೂಲಕ ಎಲ್ಲ ಹಗರಣಕೋರರು ಪರಸ್ಪರ ರಕ್ಷಿಸಿಕೊಳ್ಳಲು ಒಂದಾಗಿದ್ದಾರೆ ಎಂದರು. ಐಎನ್ಡಿಐಎ ಮೈತ್ರಿಕೂಟದ ಎಲ್ಲ ರ್ಯಾಲಿಗಳಲ್ಲೂ ಎರಡು ಕುರ್ಚಿ ಖಾಲಿ ಇರುತ್ತದೆ, ‘ಇದು ಜೈಲಿನಲ್ಲಿರುವ ನಮ್ಮ ಸಿಎಂಗಳಿಗೆ’ ಎನ್ನುತ್ತಾರೆ. ಆದರೆ ಜೂ. 4ರ ವರೆಗೆ ಕಾಯಿರಿ, ಭ್ರಷ್ಟರ ವಿರುದ್ಧದ ಮೋದಿ ಅಭಿಯಾನ ತೀವ್ರಗೊಳ್ಳಲಿದ್ದು, ಭ್ರಷ್ಟರು ಶಿಕ್ಷೆಗೊಳಗಾಗುತ್ತಾರೆ ಎಂದರು.
ಆಂಧ್ರ ಚುನಾವಣೆ: ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ…?
ತೆಲಂಗಾಣದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ, ಮದುವೆಗೆ ಹೊರಟಿದ್ದ 65 ಮಂದಿ ಪ್ರಾಣಾಪಾಯದಿಂದ ಪಾರು!