ಮುಂಬೈ: ಬಾಲಿವುಡ್ನ ದಿಗ್ಗಜ ನಟ ಅಮಿತಾಭ್ ಬಚ್ಚನ್ ಮತ್ತು ಜಯಾ ಬಾಧುರಿ ಸೊಸೆ ಐಶ್ವರ್ಯ ರೈ ಬಚ್ಚನ್ ಹಾಗೂ ಮೊಮ್ಮಗಳು ಆರಾಧ್ಯ ಅವರಿಗೂ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ.
ಆದರೆ, ಜಯಾ ಬಚ್ಚನ್, ಶ್ವೇತಾ ಬಚ್ಚನ್ ನಂದಾ, ಆಗಸ್ತ್ಯ ಬಚ್ಚನ್ ಮತ್ತು ನವ್ಯ ನವೇಲಿ ನಂದಾ ಅವರ ಕರೋನಾ ಪರೀಕ್ಷೆಯ ಪರೀಕ್ಷೆ ನೆಗೆಟಿವ್ ಆಗಿ ಬಂದಿರುವುದಾಗಿ ಹೇಳಲಾಗಿದೆ.
ಬಿಗ್ಬಿ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಕರೋನಾ ಸೋಂಕು ತಗುಲಿರುವುದು ಶನಿವಾರ ರಾತ್ರಿ ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರಿಬ್ಬರೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕರೊನಾ ಸೋಂಕಿನ ಸೌಮ್ಯಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿಯೂ, ಅಭಿಮಾನಿಗಳು ಅನಗತ್ಯವಾಗಿ ಆತಂಕಕ್ಕೆ ಒಳಗಾಬಾರದು ಎಂದು ಅಮಿತಾಭ್ ಮನವಿ ಮಾಡಿಕೊಂಡಿದ್ದರು. ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ಬಿಗ್ಬಿ ಮತ್ತು ಅಭಿಷೇಕ್ ಅವರ ತ್ವರಿತ ಚೇತರಿಕೆಗಾಗಿ ಹಾರೈಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಡುತ್ತಿದ್ದಾರೆ.
ಇದನ್ನೂ ಓದಿ: ನಾನಾವತಿ ಆಸ್ಪತ್ರೆಯಿಂದ ತಮ್ಮ ಚಿತ್ರ ಹಂಚಿಕೊಂಡ ಅಮಿತಾಭ್ ಬಚ್ಚನ್
ಅಮಿತಾಭ್ರ ಬಂಗಲೆ ಕಂಟೇನ್ಮೆಂಟ್ ವಲಯ: ಅಮಿತಾಭ್ ಬಚ್ಚನ್ ಅವರ ಮನೆಯನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಿರುವ ಬೃಹನ್ಮುಂಬೈ ಮಹಾನಗರಪಾಲಿಕೆ ಅಧಿಕಾರಿಗಳು ಭಾರಿ ಸ್ಯಾನಿಟೈಸಿಂಗ್ ಕ್ರಮ ಕೈಗೊಂಡಿದ್ದಾರೆ. ಅತಿ ವಿಶಾಲವಾದ ಕಾಂಪೌಂಡ್ನ ಸುತ್ತ ಹಾಗೂ ಬಿಗ್ಬಿ ಮನೆಯ ಹೊರಗೋಡೆಗಳ ಮೇಲೆ ವೈರಾಣುನಾಶಕವನ್ನು ಸಿಂಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೇಯರ್ ಕಿಶೋರಿ ಪೇಡ್ನೇಕರ್, ಭಾನುವಾರ ಬೆಳಗ್ಗೆ ಬಿಎಂಸಿ ವತಿಯಿಂದ ಅಮಿತಾಭ್ರ ಮನೆಯ ಸುತ್ತಮುತ್ತ ಸ್ಯಾನಿಟೈಸಿಂಗ್ ಮಾಡಲಾಯಿತು. ಬಳಿಕ ಅದನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮನೆಗೆ ಯಾರೊಬ್ಬರೂ ಪ್ರವೇಶಿಸುವಂತಿಲ್ಲ. ಯಾರೊಬ್ಬರೂ ಹೊರಬರುವಂತಿಲ್ಲ. ಮುಂಬೈ ಪೊಲೀಸರು ಮನೆಗೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಆ ಮನೆಯಲ್ಲಿದ್ದ ಎಲ್ಲರನ್ನೂ 14 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೋಗ್ರಾದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದೇ ಸುಳ್ಳು ಎಂದ ನಿವೃತ್ತ ಕರ್ನಲ್: ರಾಹುಲ್ ಗಾಂಧಿ ಕೆಂಡಾಮಂಡಲ