ಅನ್ಸಾರ್ ಇನೋಳಿ ಉಳ್ಳಾಲ
ಒಂದು ಕಡೆ ರಸ್ತೆ ವಿಸ್ತರಣೆ ಕಾಮಗಾರಿ, ಮತ್ತೊಂದೆಡೆ ಅಸಮರ್ಪಕ ರಸ್ತೆ. ವಿರುದ್ಧ ದಿಕ್ಕಿನಲ್ಲಿ ಬರುವ ಘನವಾಹನಗಳ ನಡುವೆ ಲಘು ವಾಹನ ಸವಾರರಿಗೆ ಪ್ರಾಣ ಉಳಿಸಿಕೊಳ್ಳುವ ಆತಂಕ. ಇದು ಅಸೈಗೋಳಿಯಲ್ಲಿ ಪ್ರತಿದಿನ ಕಂಡು ಬರುವ ದೃಶ್ಯ.
ನಾಟೆಕಲ್ನಿಂದ ಅಸೈಗೋಳಿವರೆಗೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಪ್ರಯಾಣಿಕರು ಜಾಗರೂಕತೆಯಿಂದ ಚಲಿಸಬೇಕಿದ್ದರೂ ಮತ್ತೊಂದೆಡೆ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹೊಂಡ ತಪ್ಪಿಸುವ ಭರದಲ್ಲಿ ಅಸೈಗೋಳಿಯಿಂದ ನಾಟೆಕಲ್ನತ್ತ ಸಂಚರಿಸುವ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದರಿಂದ ಎದುರಿನಿಂದ ಬರುವ ವಾಹನಗಳು ಕಾಣುವುದಿಲ್ಲ. ಇದರಿಂದಾಗಿ ಯಾವ ಸಂದರ್ಭದಲ್ಲಿ ಅಪಘಾತ ಸಂಭವಿಸಬಹುದು ಎನ್ನುವುದನ್ನು ಹೇಳಲಾಗದು.
ಹೊಂಡ ತಪ್ಪಿಸುವ ವಾಹನಗಳು ದ್ವಿಗುಣ ವೇಗದಲ್ಲಿ ಸಾಗುವುದರಿಂದ ಎದುರುಗಡೆಯಿಂದ ಬರುವ ದ್ವಿಚಕ್ರ ವಾಹನ ಸವಾರರು ಬದಿಗೆ ಹೋಗುವಂತೆಯೂ ಇಲ್ಲ. ಪಕ್ಕದಲ್ಲೇ ವಿದ್ಯುತ್ ಕಂಬಗಳಿರುವುದರಿಂದ ದ್ವಿಚಕ್ರ ವಾಹನ ಸವಾರರ ಆತಂಕ ಇಮ್ಮಡಿಯಾಗಿದೆ.
ಅಸೈಗೋಳಿ ರಸ್ತೆಯಲ್ಲಿ ಅಪಾಯಕಾರಿ ಹೊಂಡಗಳು ಬಿದ್ದಿದ್ದು ತಮ್ಮ ವಾಹನಗಳ ಸುರಕ್ಷತೆ ದೃಷ್ಟಿಯಲ್ಲಿ ಎಲ್ಲ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿವೆ. ಮುಂದಿನಿಂದ ಬರುವ ವಾಹನಗಳ ಸುರಕ್ಷತೆ ಬಗ್ಗೆ ಚಿಂತಿಸುವುದು ಅಗತ್ಯ. ಈ ರಸ್ತೆಗೆ ತೇಪೆ ಹಾಕುವ ಕೆಲಸವಾದರೂ ತಕ್ಷಣಕ್ಕೆ ಆಗಬೇಕು.
– ಅಶ್ರಫ್ ಹರೇಕಳ, ನಿತ್ಯ ಪ್ರಯಾಣಿಕ
ಎಲ್ಲ ರಸ್ತೆಗಳ ಹೊಂಡ ಮುಚ್ಚಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಒಂದೊಂದೇ ಕಡೆಯಲ್ಲಿ ಕೆಲಸ ಆರಂಭವಾಗಿದೆ. ಇನ್ನು 15 ದಿನಗಳಲ್ಲಿ ಎಲ್ಲ ಭಾಗದಲ್ಲಿ ಈ ಕೆಲಸ ಮುಗಿಯಲಿದೆ. ಒಂದು ತಿಂಗಳಲ್ಲಿ ಎಂಡಿಆರ್ ಮುಗಿಸಿಕೊಡುತ್ತೇವೆ.
– ಯಶವಂತ್ ಕುಮಾರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ