ನವದೆಹಲಿ: ಲಾಕ್ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿರುವ ಕೇಂದ್ರ ಸರ್ಕಾರ ಏ.20ರ ನಂತರ ಕೆಲವು ವಿನಾಯಿತಿಗಳನ್ನು ನೀಡಬಹುದು ಎಂದು ಹೇಳಿದೆ. ಕರೊನಾ ವೈರಸ್ ಹೆಚ್ಚಾಗಿ ಬಾಧಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಲಾಕ್ಡೌನ್ ಸಡಲಿಕೆ ಮಾಡಬಹುದು ಎಂದು ಹೇಳಿದೆ.
ಕರ್ನಾಟಕದಲ್ಲಿ ಸದ್ಯಕ್ಕೆ ಲಾಕ್ಡೌನ್ನಲ್ಲಿ ಸಡಿಲಿಕೆ ಇಲ್ಲ. ಯಥಾ ಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಹಾಗೇ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ತಾವೂ ಸಹ ಲಾಕ್ಡೌನ್ನಲ್ಲಿ ಯಾವುದೇ ಸಡಿಲಿಕೆ ಮಾಡುವುದಿಲ್ಲ. ದೆಹಲಿಯಲ್ಲಿ ಏ.27ರವರೆಗೆ ಲಾಕ್ಡೌನ್ ಯಥಾ ಸ್ಥಿತಿಯಲ್ಲಿಯೇ ಇರಲಿದೆ ಎಂದಿದ್ದಾರೆ.
ದೆಹಲಿಯಲ್ಲಿ ಒಟ್ಟು 11 ಜಿಲ್ಲೆಗಳಿವೆ. ಎಲ್ಲ ಜಿಲ್ಲೆಗಳೂ ಕರೊನಾ ಹಾಟ್ಸ್ಫಾಟ್ಗಳೆಂದೇ ಗುರುತಿಸಲ್ಪಟ್ಟಿವೆ. ಕಂಟೇನ್ಮೆಂಟ್ ವಲಯಗಳಲ್ಲಿ ನಿಯಮಗಳನ್ನು ಸಡಲಿಸಬೇಡಿ. ಲಾಕ್ಡೌನ್ ಕಟ್ಟುನಿಟ್ಟಾಗಿ ಮುಂದುವರಿಸಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹಾಗಾಗಿ ದೆಹಲಿಯಲ್ಲಿ ಏ.27ರವರೆಗೂ ಕಟ್ಟುನಿಟ್ಟಾಗಿ ಲಾಕ್ಡೌನ್ ಇರಲಿದೆ ಎಂದಿದ್ದಾರೆ.
ಏ.27ರಂದು ತಜ್ಞರೊಂದಿಗೆ ಸಭೆ ನಡೆಸುತ್ತೇವೆ. ಹಾಗೇ ದೆಹಲಿ ಪರಿಸ್ಥಿತಿ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸುತ್ತೇವೆ. ಅದಾದ ಬಳಿಕವಷ್ಟೇ ಅಗತ್ಯವಿದ್ದರೆ ಲಾಕ್ಡೌನ್ನಲ್ಲಿ ಸಡಿಲಿಕೆ ಮಾಡುತ್ತೇವೆ ಎಂದಿದ್ದಾರೆ.
ದೆಹಲಿಯಲ್ಲಿ ಇದುವರೆಗೆ 1900 ಕರೊನಾ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 26 ಮಂದಿ ಐಸಿಯುವಿನಲ್ಲಿದ್ದಾರೆ. ಆರು ಜನ ವೆಂಟಿಲೇಟರ್ ಸಪೋರ್ಟ್ನಲ್ಲಿದ್ದಾರೆ. 43 ಮಂದಿ ಮೃತಪಟ್ಟಿದ್ದಾರೆ. ದೆಹಲಿಯ ಜನರ ಸುರಕ್ಷತಾ ದೃಷ್ಟಿಯಿಂದ ಲಾಕ್ಡೌನ್ ಹೀಗೇ ಮುಂದುವರಿಸುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)
ಸದ್ಯಕ್ಕಿಲ್ಲ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ, ಕಾರ್ಯಕ್ರಮ ಮುಂದೂಡಿದ ತೀರ್ಥಕ್ಷೇತ್ರ ಟ್ರಸ್ಟ್