ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರೊಂದಿಗೆ ಭಾರತಕ್ಕೆ ಬರಲಿರುವ ಅವರ ಪತ್ನಿ ಮೆಲಾನಿಯಾ ಟ್ರಂಪ್ ದೆಹಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ದೆಹಲಿ ಶಾಲೆಗಳಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಾರಂಭಿಸಿರುವ ಹ್ಯಾಪಿನೆಸ್ ಕ್ಲಾಸ್ನ್ನು ವೀಕ್ಷಿಸಲಿದ್ದಾರೆ.
ಆದರೆ ಮೆಲಾನಿಯಾ ಟ್ರಂಪ್ ಅವರು ದೆಹಲಿ ಸರ್ಕಾರಿ ಶಾಲೆಗಳಿಗೆ ತೆರಳಿ ಹ್ಯಾಪಿನೆಸ್ ಕ್ಲಾಸ್ನಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನೇ ಹೊರಗಿಡಲಾಗಿದೆ ಎಂದು ದೆಹಲಿ ಸರ್ಕಾರದ ಮೂಲಗಳು ತಿಳಿಸಿವೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಯಾವುದೇ ಆಮಂತ್ರಣವನ್ನೂ ನೀಡಿಲ್ಲ. ಈ ವಿಚಾರವಾಗಿ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧ ಕಿಡಿಕಾರಿದೆ. ಮೆಲಾನಿಯಾ ಅವರ ಸಮಾರಂಭಕ್ಕೆ ದೆಹಲಿ ಮುಖ್ಯಮಂತ್ರಿಯನ್ನು ಆಹ್ವಾನಿಸದೆ ಇರುವುದು ಬಿಜೆಪಿಯ ತಂತ್ರ ಎಂದು ಹೇಳಿದೆ.
ಆಪ್ ನಾಯಕಿ ಪ್ರೀತಿ ಶರ್ಮಾ ಮೆನನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಇದು ನರೇಂದ್ರ ಮೋದಿಯವರ ಸಣ್ಣತನವನ್ನು ತೋರುತ್ತದೆ. ನೀವು ಅರವಿಂದ್ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರನ್ನು ಆಹ್ವಾನ ಮಾಡದೆ ಇರಬಹುದು. ಆದರೆ ಅವರ ಕೆಲಸವೇ ಅವರ ಪರವಾಗಿ ಮಾತನಾಡುತ್ತದೆ ಎಂದು ಹೇಳಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಸಂಬಿತ್ ಪಾತ್ರಾ, ಕೆಲವು ವಿಚಾರಗಳಲ್ಲಿ ಕೀಳುಮಟ್ಟದ ರಾಜಕೀಯ ಮಾಡಬಾರದು. ನಾವೇ ಪರಸ್ಪರ ಕಾಲೆಳೆದುಕೊಳ್ಳಲು ಶುರುಮಾಡಿದರೆ ಇನ್ನೊಂದು ದೇಶದೆದುರು ಭಾರತ ಅಪಖ್ಯಾತಿಗೆ ಒಳಗಾಗುತ್ತದೆ ಎಂದಿದ್ದಾರೆ.
ಇದಕ್ಕೂ ಮೊದಲು, ಮೆಲಾನಿಯಾ ಟ್ರಂಪ್ ಅವರ ಸರ್ಕಾರಿ ಶಾಲೆ ಸಮಾರಂಭದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಸಿಸೋಡಿಯಾ ಪಾಲ್ಗೊಳ್ಳುತ್ತಾರೆ. ಅಲ್ಲದೆ, ತಮ್ಮ ಸರ್ಕಾರ ಕೈಗೊಂಡ ಸಾರ್ವಜನಿಕ ಶಿಕ್ಷಣ ಪ್ರಯೋಗಗಳ ಬಗ್ಗೆ ಮೆಲಾನಿಯಾ ಅವರಿಗೆ ವಿವರಿಸುತ್ತಾರೆ. ಹ್ಯಾಪಿನೆಸ್ ಕ್ಲಾಸ್ ಬಗ್ಗೆಯೂ ಮಾಹಿತಿ ನೀಡುತ್ತಾರೆ ಎಂದು ಹೇಳಲಾಗಿತ್ತು.
ಈಗ ಮೆಲಾನಿಯಾ ಟ್ರಂಪ್ ಕಾರ್ಯಕ್ರಮದಲ್ಲಿ ಇವರಿಬ್ಬರು ಪಾಲ್ಗೊಳ್ಳುತ್ತಾರೋ, ಇಲ್ಲವೋ ಎಂಬುದು ಖಚಿತವಾಗಿಲ್ಲ.(ಏಜೆನ್ಸೀಸ್)