ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಮತದಾನದ ನಡುವೆಯೂ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರ ನಡುವಿನ ವಾಕ್ಪ್ರಹಾರಗಳು ಮುಂದುವರಿದಿದೆ.
ಇಂದು ಬೆಳಗ್ಗೆ ಮತದಾನ ಶುರುವಾಗುವ ಮುಂಚೆ ಟ್ವೀಟ್ ಮಾಡಿದ್ದ ಸಿಎಂ ಅರವಿಂದ್ ಕೇಜ್ರಿವಾಲ್, ಇಂದು ಎಲ್ಲರು ಹೋಗಿ ಮತದಾನ ಮಾಡಿ. ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಮನವಿ ಮಾಡುವುದೇನೆಂದರೆ ನಿಮ್ಮ ಮನೆಯ ಜವಾಬ್ದಾರಿಯನ್ನು ಎತ್ತಿಹಿಡಿಯಿರಿ. ಅಲ್ಲದೆ, ದೇಶ ಮತ್ತು ದೆಹಲಿ ಜವಾಬ್ದಾರಿಗಳು ಕೂಡ ನಿಮ್ಮ ಹೆಗಲ ಮೇಲಿದೆ. ಹೀಗಾಗಿ ಮಹಿಳೆಯರೆಲ್ಲರು ಹೊರಗೆ ಹೆಜ್ಜೆ ಹಾಕಿ ಮತ ಚಲಾಯಿಸಿ. ಯಾರಿಗೆ ಮತ ಚಲಾಯಿಸುವುದು ಒಳಿತು ಎಂದು ಪುರುಷರೊಂದಿಗೆ ಒಮ್ಮೆ ಚರ್ಚಿಸಿ ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಹಿಳೆಯರ ಸಾಮರ್ಥ್ಯವನ್ನು ನಿರ್ಲಕ್ಷಿಸುವಂತಿಲ್ಲ. ಯಾರಿಗೆ ಮತ ಚಲಾಯಿಸಬೇಕೆಂದು ನಿರ್ಧರಿಸುವ ಸಾಮರ್ಥ್ಯ ಅವರಿಗಿದೆ ಎಂದು ತಿರುಗೇಟು ನೀಡಿದ್ದರು.
ಇದಕ್ಕೆ ಮರು ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್, ದೆಹಲಿಯ ಮಹಿಳೆಯರು ಯಾರಿಗೆ ವೋಟ್ ಮಾಡಬೇಕೆಂಬುದನ್ನು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
ದೆಹಲಿಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಗ್ಗೆಯಿಂದ ಚುನಾವಣೆ ಆರಂಭವಾಗಿದ್ದು, ಬಿರುಸಿನ ಮತದಾನ ನಡೆಯುತ್ತಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಮತದಾನ ಮುಕ್ತಾಯವಾಗಲಿದೆ. (ಏಜೆನ್ಸೀಸ್)