ಯಲಬುರ್ಗಾ: ಆಧುನಿಕ ಕಾಲದಲ್ಲಿ ಕಣ್ಮರೆಯಾಗುತ್ತಿರುವ ರಂಗಭೂಮಿ ಕಲೆ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ತಾಪಂ ಕೆಡಿಪಿ ಮಾಜಿ ಸದಸ್ಯ ಅಂದಾನಗೌಡ ಪಾಟೀಲ್ ಹೇಳಿದರು.
ತಾಲೂಕಿನ ಮುಧೋಳ ಶ್ರೀ ತ್ರೀಲಿಂಗೇಶ್ವರ ಜಾತ್ರೋತ್ಸವ ನಿಮಿತ್ತ ಗೂಳಿಬಸವೇಶ್ವರ ನ್ಯಾಟ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ‘ಸಿಡಿದೆದ್ದ ಸೂರ್ಯ ಚಂದ್ರ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ರಂಗಭೂಮಿ ಕಲೆಗೆ ಸಮಾಜ ತಿದ್ದುವ ಶಕ್ತಿ ಇದೆ. ಮುಧೋಳ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಸಮಾಜಕ್ಕೆ ಹಲವು ಕಲಾವಿದರನ್ನು ಕೊಡುಗೆ ನೀಡಿದೆ. ಕಲೆ, ಸಾಹಿತ್ಯ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಆನಂದ ಉಳ್ಳಾಗಡ್ಡಿ ಮಾತನಾಡಿ, ನಾಟಕ ಸನ್ನಿವೇಶದಲ್ಲಿ ಬರುವ ಪಾತ್ರಗಳು ಸಮಾಜಕ್ಕೆ ಪೂರಕವಾಗಿದೆ. ರಂಗಭೂಮಿ ಕಲೆಗೆ ಪುರಾತನ ಇತಿಹಾಸವಿದೆ. ಗ್ರಾಮೀಣ ಭಾಗದಲ್ಲಿ ನಾಟಕಗಳು ಸಮಾಜದ ಬದಲಾವಣೆಗೆ ಸಹಕಾರಿಯಾಗಿವೆ ಎಂದು ಹೇಳಿದರು.
ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ನಿಡಗುಂದಿಕೊಪ್ಪದ ಶ್ರೀ ಚನ್ನಬಸವ ಸ್ವಾಮೀಜಿ, ಕೆಆರ್ಪೇಟೆಯ ಶ್ರೀ ಚನ್ನವೀರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಮುಮ್ತಾಜ್ಬಿ ಹಿರೇಮನಿ, ಉಪಾಧ್ಯಕ್ಷ ಅಶೋಕ ಭಜಂತ್ರಿ, ಪ್ರಮುಖರಾದ ಛತ್ರಪ್ಪ ಛಲವಾದಿ, ಗುರಪ್ಪ ಬಳಿಗಾರ್, ಬಾಶುಸಾಬ್ ಆರಬಳ್ಳಿನ, ಮಂಜುನಾಥ ಮುರಡಿ, ಯಲ್ಲಪ್ಪ ಹುನಗುಂದ ಇದ್ದರು.