ಬೋರಗಾಂವ: ದೇಶ ಸೇರಿದಂತೆ ರಾಜ್ಯದಲ್ಲಿ ಮಹಾಮಾರಿ ಕರೊನಾ ವೈರಸ್ ಹಾವಳಿ ಹೆಚ್ಚುತ್ತಿದ್ದು, ಅದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ನಿರಂತರ ಪ್ರಯತ್ನದಲ್ಲಿದೆ. ಈ ಕಾರ್ಯಕ್ಕೆ ನೆರವಾಗಲು ಅರಿಹಂತ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷ ರಾವಸಾಹೇಬ ಪಾಟೀಲ ಅವರು ತಮ್ಮ 77ನೇ ಜನ್ಮದಿನದ ಅಂಗವಾಗಿ ಹಾಗೂ ಅರಿಹಂತ ಉದ್ಯೋಗ ಸಮೂಹ ವತಿಯಿಂದ 12 ಲಕ್ಷ ರೂ. ನೆರವು ನೀಡಿದರು.
ಗೋಕಾಕ ಪಟ್ಟಣದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಶುಕ್ರವಾರ ಚೆಕ್ ಹಸ್ತಾಂತರಿಸಿದರು.ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ರಾವಸಾಹೇಬ ಪಾಟೀಲರು ಪ್ರತಿವರ್ಷ ತಮ್ಮ ಜನ್ಮದಿನದಂದು ವಿವಿಧ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಆದರೆ, ಪ್ರಸಕ್ತ ವರ್ಷ ಕರೊನಾ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ.
ರಾವಸಾಹೇಬ ಅವರು ತಮ್ಮ ಜನ್ಮದಿನ ಆಚರಿಸಿಕೊಳ್ಳದೆ ಸರ್ಕಾರದ ನೆರವಿಗೆ ಧಾವಿಸಿರುವುದು ಅನುಕರಣೀಯ ಕಾರ್ಯ ಎಂದರು.
ಉದ್ಯಮಿ ಅಭಿನಂದನ ಪಾಟೀಲ, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಪಿಕೆಪಿಎಸ್ ಚೇರ್ಮನ್ ಉತ್ತಮ ಪಾಟೀಲ, ಅಶೋಕ ಅಸೋದೆ, ರೋಹಿತ ಚೌಗುಲಾ ಇದ್ದರು.