ಅರಕೇರಾ: ಧಾರ್ಮಿಕತೆ ಎಂಬುದು ಭವ-ಬಂಧನದಿಂದ ದೂರ ಮಾಡಿ, ಮುಕ್ತಿ ಕಡೆ ಕರೆದುಕೊಂಡೊಯ್ಯುವುದು ಎಂದು ಗೋಕಾಕ ತಾಲೂಕಿನ ಕುಂದರಗಿ ಅಡವಿಸಿದ್ಧೇಶ್ವರ ಮಠದ ಶ್ರೀ ಅಮರಸಿದ್ಧೇಶ್ವರ ಸ್ವಾಮಿಜಿ ಹೇಳಿದರು.
ಪಟ್ಟಣದ ಶ್ರೀ ಸೂಗೂರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಧರ್ಮೋಪದೇಶ ಮಾಡಿದರು. ಸ್ವರ್ಗ ನರಕವೆಲ್ಲ ಇಲ್ಲೇ ಇದೆ. ಬದುಕಿದ್ದಾಗ ಜೀವನವನ್ನು ಸ್ವರ್ಗ ಮಾಡಿಕೊಂಡು ಜೀವಿಸಬೇಕು. ಸಂಸ್ಕಾರವಂತ ಸಮಾಜ ಕಟ್ಟುವ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನ ಅವಶ್ಯ. ದುರ್ಬಲರಿಗೆ ದಾನ ಮಾಡಬೇಕು ಎಂದರು.
ಸಂಸಾರದಲ್ಲಿ ಸಹನೆ, ಸಮಾಧಾನ, ತಾಳ್ಮೆ ಹೊಂದಿರಬೇಕು. ಪುರುಷರು ಸಾಕಷ್ಟು ಒತ್ತಡಗಳ ನಡುವೆ ಸಂಸಾರ ನಡೆಸುತ್ತಿರುತ್ತಾರೆ. ಜತೆಗೆ ಕೌಟುಂಬಿಕ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿರುತ್ತಾರೆ. ಆಭರಣ, ಆಸ್ತಿ, ಅಂತಸ್ತು, ಹಣ, ಎಲ್ಲವೂ ಒತ್ತಡದಿಂದ ಪಡೆಯುವಂತದಲ್ಲ. ಆಸೆಗಳ ಪೂರೈಕೆಗಾಗಿ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಬಿಜೆಪಿ ಹಿರಿಯ ಮುಖಂಡ ಕೆ.ಅನಂತರಾಜ ನಾಯಕ, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಮಾತನಾಡಿದರು. ಚಂದ್ರಶೇಖರಯ್ಯ ಸ್ವಾಮಿ ಹಿರೇಮಠ, ರಾಚಯ್ಯ ಸ್ವಾಮಿ ಮಠಪತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಕೆ.ಅನಂತರಾಜ ನಾಯಕ, ಎ.ರಾಜಶೇಖರ ನಾಯಕ, ತಿಮ್ಮಪ್ಪ ನಾಯಕ ಪೋ.ಪಾ, ರಾಕೇಶ ಗೌಡ ಪೋ.ಪಾ, ಕೆ.ಭಗವಂತ್ರಾಯ ನಾಯಕ, ಬಸವರಾಜ ಪೂಜಾರಿ, ಚಂದ್ರಶೇಖರ ಶೆಟ್ಟಿ, ಸೀತಣ್ಣ ನಾಯಕ ಗುರಿಕೇರಾ, ವಿರುಪಣ್ಣ ನಾಯಕ ದೊರೆ, ಬಸವರಾಜ ಕ್ವಾಟೆ ದೊರೆ, ರಮೇಶ ಗುರುವಿನ, ಡಾ.ಎಚ್.ಎ ನಾಡಗೌಡ, ಸಿದ್ಧಾರ್ಥ ಹವಾಲ್ದಾರ, ಶರಣಗೌಡ ಮಾ.ಪಾ, ಮಲ್ಲಿಕಾರ್ಜುನ ಸಾಹುಕಾರ, ಗೌಡಪ್ಪ ಗೌಡ ಮಾ.ಪಾ, ಕೆ.ಮಲ್ಲಪ್ಪ ಸಾಹುಕಾರ, ಜಿ.ಬೂದೆಪ್ಪ ಸಾಹುಕಾರ, ಎಮ್.ಶಂಕ್ರಪ್ಪ ಸಾಹುಕಾರ, ರಹೀಂ ಖಾಜಿ, ಡಾ.ಸಂಜಯ್ ಭಾವಿಕಟ್ಟಿ, ಡಾ.ರಾಘವೇಂದ್ರ ವಡಗೇರಿ ಇತರರಿದ್ದರು.
ದೇವಸ್ಥಾನ ಮತ್ತು ಸುತ್ತಲಿನ ಆವರಣ ದೀಪಗಳಿಂದ ಕಂಗೊಳಿಸುತ್ತಿತ್ತು. ಭಕ್ತರು ದೀಪಗಳನ್ನು ಹಚ್ಚಿ ಭಕ್ತಿ ಮೆರೆದರು. ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.