ಮೈಸೂರು: ವಿದ್ಯಾರ್ಥಿಗಳು ವಿದ್ಯೆ ಕಲಿತರೆ ಸಾಲದು, ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸಲಹೆ ನೀಡಿದರು.
ಯುವರಾಜ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜಿನ 2023-24ನೇ ಸಾಲಿನ ‘ಜ್ಞಾನವಾಹಿನಿ’ಯ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ, ಎನ್ಸಿಸಿ ಮತ್ತು ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಕ್ತಿತ್ವ ವಿಕಸನಗೊಳ್ಳ ಬೇಕಾದರೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಲಿವೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿವುದರಿಂದ ವಿದ್ಯಾರ್ಥಿಗಳಿಗೆ ಪಾಠದ ಜತೆ ಜತೆಗೆ ಇತರ ಸಾಮಾನ್ಯ ಜ್ಞಾನಗಳ ಅರಿವೂ ಮೂಡಲಾರಂಭಿಸುತ್ತದೆ ಎಂದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಬೇಕಾದ ವಿದ್ಯೆಯನ್ನು ಪಠ್ಯೇತರ ಚಟುವಟಿಕೆಗಳು ಕಲಿಸುತ್ತವೆ. ಕ್ರೀಡೆ, ಸಂಗೀತ, ನೃತ್ಯ, ಜಾನಪದ, ನಾಟಕಗಳು ನಮ್ಮ ಭಾಗವಾಗಬೇಕು. ಶಿಸ್ತು, ಸಂಯಮ, ಸಹನೆ, ಧೈರ್ಯ, ಉತ್ಸಾಹ ಎಲ್ಲವೂ ವಿದ್ಯಾರ್ಥಿಗೆ ದಕ್ಕುತ್ತವೆ ಎಂದರು.