More

    ರಾಜಸ್ಥಾನದಲ್ಲಿ ಏನೊಂದು ಸರಿಯಿಲ್ಲ; ಯಾವುದೇ ಕ್ಷಣದಲ್ಲಿ ಪ್ರಕ್ಷುಬ್ಧಗೊಳ್ಳಬಹುದು ಪ್ರಶಾಂತ ಸಾಗರ

    ಜೈಪುರ: ರಾಜಸ್ಥಾನದ ಉಪಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷರಾಗಿದ್ದೂ, ಪಕ್ಷದಿಂದ ಹೊರಹೋಗಲು ಒಂದು ಹೆಜ್ಜೆಯನ್ನು ಹೊರಗಿಟ್ಟಿದ್ದ ಸಚಿನ್​ ಪೈಲಟ್​ ಇದೀಗ ತಮ್ಮ ಹೆಜ್ಜೆಯನ್ನು ಹಿಂತೆಗೆದುಕೊಂಡಿದ್ದಾರೆ. ಇದರಿಂದಾಗಿ ಇನ್ನೇನು ಪತನಗೊಂಡಿತು ಎಂದೇ ಹೇಳಲಾಗುತ್ತಿದ್ದ ಅಶೋಕ್​ ಗೆಹ್ಲೋಟ್​ ನೇತೃತ್ವದ ಸರ್ಕಾರ ಸದ್ಯ ಬೀಸುವ ದೊಣ್ಣೆಯಿಂದ ಪಾರಾಗಿದೆ. ಆದರೂ ಎಲ್ಲವೂ ಸರಿಯಾಗಿದೆ ಎಂದು ಅನ್ಯಥಾ ಭಾವಿಸುವುದು ತಪ್ಪಾಗುತ್ತದೆ.

    ಮನೆಯಿಂದ ಹೊರಹೋಗಲು ಒಂದು ಹೆಜ್ಜೆ ಮುಂದಿಟ್ಟಿದ್ದ ಸಚಿನ್​ ಪೈಲಟ್​ ಮತ್ತು ಅವರ ಬೆಂಬಲಿಗರು ಹೆಜ್ಜೆಯನ್ನು ಹಿಂತೆಗೆದುಕೊಂಡು ಪಕ್ಷದಲ್ಲೇ ಉಳಿಯುತ್ತಿರುವ ರೀತಿ, ತಾವು ಕೊಟ್ಟಿರುವ ಮತ್ತು ಕೊಡುತ್ತಿರುವ ಸಂದರ್ಶನಗಳಲ್ಲಿ ಹೋರಾಟವನ್ನು ಮುಂದುವರಿಸುವ ಅರ್ಥದ ಮಾತುಗಳನ್ನು ಆಡುತ್ತಿರುವ ಸಚಿನ್​ ಪೈಲಟ್​ ಅವರ ಪರಿ ಅಶೋಕ್​ ಗೆಹ್ಲೋಟ್​ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶಾಸಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

    ಹೀಗಾಗಿ ಅವರು ಪೈಲಟ್​ ಬಳಗದ ಬಗ್ಗೆ ಭಾರಿ ಅಪನಂಬಿಕೆ ಮೂಡಿಸಿಕೊಂಡಿದ್ದು, ಅವರ ವಿರುದ್ಧ ಗೆಹ್ಲೋಟ್​ ಅವರ ಕಿವಿಕಚ್ಚಲಾರಂಭಿಸಿದ್ದಾರೆ.
    ಇಷ್ಟು ಸಾಲದು ಎಂಬಂತೆ ತಮ್ಮ ಅಪನಂಬಿಕೆಯನ್ನು ವ್ಯಕ್ತಪಡಿಸಿ ಮತ್ತು ಅಳಲನ್ನು ತೋಡಿಕೊಂಡು ಪಕ್ಷದ ಹೈಕಮಾಂಡ್​ಗೂ ಪತ್ರ ಬರೆದಿರುವ ಕೆಲ ಶಾಸಕರು, ಪೈಲಟ್​ ಮತ್ತು ಅವರ ಬೆಂಬಲಿಗ 18 ಶಾಸಕರಿಗೆ ರಾಜಕೀಯ ಪುನರುಜ್ಜೀವನ ಕೊಡಲಾಗುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ರಾಜಕಾರಣಕ್ಕೆ ಪೈಲಟ್​ ಮತ್ತು ಅವರ ಬೆಂಬಲಿಗರು ಮರಳುತ್ತಿರುವ ವೇಗ ಮತ್ತು ಮರಳಲು ತೋರುತ್ತಿರುವ ಆವೇಗದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಚೀನಾ ಮೂಲದ ವ್ಯಕ್ತಿಯಿಂದ ಭಾರತದಲ್ಲಿ 1 ಸಾವಿರ ಕೋಟಿ ರೂಪಾಯಿ ಹವಾಲಾ ದಂಧೆ

    ಪೈಲಟ್​ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವವರಲ್ಲಿ ಸಾರಿಗೆ ಸಚಿವ ಪ್ರತಾಪ್​ ಸಿಂಗ್​ ಖಚಾರಿಯಾವಾಸ್​ ಪ್ರಮುಖರಾಗಿದ್ದಾರೆ. ಒಂದು ಕಾಲದಲ್ಲಿ ಇವರು ಪೈಲಟ್​ ಅವರ ಆಪ್ತರಾಗಿದ್ದವರು. ಇದೀಗ ಇವರು ಗೆಹ್ಲೋಟ್​ ಪಾಳೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಂಡಿದ್ದಾರೆ. ಪೈಲಟ್​ ಬಂಡಾಯ ಎದ್ದಾಗಿನಿಂದ ಅವರು ಪಕ್ಷದಲ್ಲೇ ಉಳಿಯುವವರೆಗಿನ ಒಂದು ತಿಂಗಳಲ್ಲಿ ಪೈಲಟ್​ ವಿರುದ್ಧ ಎತ್ತರದ ಸ್ಥಾಯಿಯಲ್ಲಿ ನಿರಂತರವಾಗಿ ಟೀಕಿಸಿದವರು ಇವರು.
    ಪೈಲಟ್​ ಮತ್ತು ಅವರ ಬೆಂಬಲಿಗ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಂಡು ಅವರಿಗೆ ಹೆಚ್ಚಿನ ಸ್ಥಾನಮಾನ ನೀಡುವ ಹೈಕಮಾಂಡ್​ನ ನಿರ್ಧಾರದ ಬಗ್ಗೆ ಪಕ್ಷದ ಶಾಸಕರಲ್ಲಿ ಭಾರಿ ಆಕ್ರೋಶ ಮನೆ ಮಾಡಿದ್ದು, ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂದು ಹೇಳಲಾಗುತ್ತಿದೆ.

    ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಹೊರತಾಗಿಯೂ ಪೈಲಟ್​ ಬಂಡಾಯ ಎದ್ದು ಸರ್ಕಾರವನ್ನು ಪತನದ ಅಂಚಿಗೆ ಕೊಂಡೊಯ್ದಿದ್ದರು. ಇದಕ್ಕಾಗಿ ಅವರು ಒಂದು ತಿಂಗಳು ತಮ್ಮ ಬೆಂಬಲಿಗೆ ಶಾಸಕರೊಂದಿಗೆ ಹೋಟೆಲ್​ನಲ್ಲಿ ತಂಗಿದ್ದರು ಎಂಬು ಖಚಾರಿಯಾವಾಸ್​ ಅವರ ಪ್ರಮುಖ ಆರೋಪವಾಗಿದೆ. ಆದರೆ ಈ ಆರೋಪಗಳು ಪಕ್ಷದ ಕಾರ್ಯಕರ್ತರ ಬೇಗುದಿಯಾಗಿವೆಯೇ ಹೊರತು ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯಗಳಲ್ಲ ಎಂದು ತಿಪ್ಪೆ ಸಾರಿಸಲು ಅವರು ಪ್ರಯತ್ನಿಸಿದ್ದಾರೆ.

    ಸಂಪುಟ ಪುನರಾಚನೆ ವೇಳೆ ಅಸಮಾಧಾನ ಸ್ಫೋಟ: ಬಂಡಾಯ ಎದ್ದ ಸಂದರ್ಭದಲ್ಲಿ ಸಚಿನ್​ ಪೈಲಟ್​ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಲಾಗಿತ್ತು. ಇದೀಗ ಅವರನ್ನು ಪಕ್ಷದಲ್ಲೇ ಉಳಿದುಕೊಂಡಿರುವುದರಿಂದ ಅವರಿಗೆ ಸಚಿವ ಸ್ಥಾನ ಕೊಡಲೇ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಶೋಕ್​ ಗೆಹ್ಲೋಟ್​ ಸಚಿವ ಸಂಪುಟವನ್ನು ಪುನಾರಚಿಸುವುದು ಅನಿವಾರ್ಯವಾಗುತ್ತದೆ. ಈ ಸಂದರ್ಭದಲ್ಲಿ ಪೈಲಟ್​ ಮತ್ತು ಅವರ ಬೆಂಬಲಿಗರಿಗೆ ಅದು ಯಾವ ಬಗೆಯ ಸ್ಥಾನಮಾನ ಲಭಿಸುತ್ತದೆ ಎಂಬುದನ್ನು ಅವಲಂಬಿಸಿ ಅವರನ್ನು ಸಮಾಧಾನಪಡಿಸಲು ಪಕ್ಷದ ಹೈಕಮಾಂಡ್​ ನೀಡಿರುವ ಭರವಸೆಗಳು ಏನೆಂಬುದು ಸ್ಪಷ್ಟವಾಗಲಿದೆ.

    ಇದೇ ವೇಳೆ ಈ ಪ್ರಕ್ರಿಯೆಯಲ್ಲಿ ಗೆಹ್ಲೋಟ್​ ಆಪ್ತರು ಮತ್ತು ಪೈಲಟ್​ ಆಪ್ತರ ನಡುವೆ ಅಸಮಾಧಾನ ಸ್ಫೋಟಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಮೇಲ್ನೋಟಕ್ಕೆ ರಾಜಸ್ಥಾನ ರಾಜಕೀಯ ಸಮುದ್ರ ಪ್ರಶಾಂತವಾಗಿರುವಂತೆ ಕಾಣುತ್ತಿದ್ದರೂ, ಹಠಾತ್ತನೆ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇಲ್ಲದಿಲ್ಲ.

    ಮಂಗಳವಾರ ರಾತ್ರಿ ನಡೆದ ಭಯಾನಕ ಕ್ರೌರ್ಯದ ಇಂಚಿಂಚೂ ಬಿಚ್ಚಿಟ್ಟ ಡಿಜೆ ಹಳ್ಳಿ ಠಾಣಾ ಇನ್ಸ್​ಪೆಕ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts