ಬಾಗಲಕೋಟೆ : ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬಿಜೆಪಿ ಜಾರಿಗೊಳಿಸಿರುವ ಜನಪರ ಯೋಜನೆ, ಕಾಯ್ದೆಗಳನ್ನು ತೆಗೆದು ಹಾಕಲು ಮುಂದಾಗಿದ್ದು, ಇದು ಜನ ವಿರೋಧಿ ನೀತಿಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಸಂಜಯ ಪಾಟೀಲ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ, ಎಪಿಎಂಸಿ, ನೀರಾವರಿ ಸೇರಿ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರ್ಕಾರ ಒತ್ತು ನೀಡಿತ್ತು. ಜನರ ಬೇಡಿಕೆಗೆಗನ್ವಯ ಜಾರಿಗೊಳಿಸಿದ್ದ ಕಾಯ್ದೆ, ಕಾನೂನುಗಳನ್ನು ತೆಗೆದುಹಾಕಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದ್ದು, ಈ ಬಗ್ಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ರೈತರು ಮುಕ್ತವಾಗಿ ವ್ಯಾಪಾರ ಮಾಡುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಆದರೆ, ಅದನ್ನು ರದ್ದುಗೊಳಿಸಲಾಗುತ್ತಿದೆ. ವಿದ್ಯುತ್ ದರ ಹೆಚ್ಚಳ ಮಾಡಿದೆ. ರೈತ ವಿದ್ಯಾನಿಧಿ ಯೋಜನೆ ರದ್ದುಗೊಳಿಸಲು ಯೋಚಿಸುತ್ತಿದೆ. ಜಿಲ್ಲೆಗೊಂದು ಗೋಶಾಲೆ ರದ್ದುಪಡಿಸಿ ಅಕ್ರಮ ಗೋ ಸಾಗಾಣಿಕೆಗೆ ಪ್ರೋತ್ಸಾಹಿಸಲು ಮುಂದಾಗಿದೆ. ರಾಜ್ಯದ 50 ಲಕ್ಷ ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆಯಡಿ 10 ಸಾವಿರ ರೂ. ಹೆಚ್ಚುವರಿ ಸಹಾಯಧನ ನೀಡಲು ನಮ್ಮ ಸರ್ಕಾರದಲ್ಲಿ ನಿರ್ಣಯಗೊಂಡಿತ್ತು. ಈಗ ಅದನ್ನೂ ರದ್ದುಗೊಳಿಸಲಾಗುತ್ತಿದೆ ಎಂದು ದೂರಿದರು.
ಇದನ್ನೂ ಓದಿ: ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ
ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆ ಬಿಜೆಪಿ ಸರ್ಕಾರ ಎರಡು ಕಂತುಗಳಲ್ಲಿ ನೀಡುತ್ತಿದ್ದ 4 ಸಾವಿರ ರೂಗಳನ್ನು ನಿಲ್ಲಿಸಲಾಗುತ್ತಿದೆ. ರೈತ ಶಕ್ತಿ ಯೋಜನೆ, ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದುಗೊಳಿಸಲಾಗುತ್ತಿದೆ. ನೀರಾವರಿಗೆ ಒದಗಿಸಿದ್ದ 23 ಸಾವಿರ ಕೋಟಿ ರೂ. ಅನುದಾನವನ್ನು ಕಾಂಗ್ರೆಸ್ 19 ಸಾವಿರ ಕೋಟಿ ರೂಗಳಿಗೆ ಇಳಿಸಿದೆ ಎಂದು ಆರೋಪಿಸಿದರು.
ಮುಖಂಡರಾದ ಬಸವರಾಜ ಮಳಲಿ, ರಾಜು ರೇವಣಕರ, ರಾಜು ನಾಯ್ಕರ, ರಾಮಣ್ಣ ಹೆರಕಣ್ಣವರ ಇತರರಿದ್ದರು.