ಸುಂಟಿಕೊಪ್ಪ: ಏಳನೇ ಹೊಸಕೋಟೆ ಸಂತ ಸೆಬಾಸ್ಟೀನ್ ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ ಹಾಗೂ ಭಾನುವಾರ ವಿಶೇಷ ಪೂಜೆ, ಆರಾಧನೆ, ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಹಾಗೂ ಸಂತ ಸಬಾಸ್ಟೀನ್ ಅವರ ಮೂರ್ತಿಯ ಮೆರವಣಿಗೆ ನೆರವೇರಿಸಲಾಯಿತು.
ಶನಿವಾರ ಸಂಜೆ ಸಂತ ಸೆಬಾಸ್ಟೀನ್ ದೇವಾಲಯ ಧರ್ಮಗುರು ಸೆಬಾಸ್ಟೀನ್ ಪೂವತ್ತಿಗಲ್ ಧ್ವಜಾರೋಹಣ ನೇರವೇರಿಸುವ ಮೂಲಕ ಹಬ್ಬದ ಆರಾಧನೆ ಹಾಗೂ ವಿಶೇಷ ಬಲಿ ಪೂಜೆ ನೆರವೇರಿಸಿದು.
ಭಾನುವಾರ ಬೆಳಗ್ಗೆ 10ಗಂಟೆಗೆ ಸಂತ ಸೆಬಾಸ್ಟೀನ್ ಅವರ ವಾರ್ಷಿಕೋತ್ಸವ ಅಂಗವಾಗಿ ಮಡಿಕೇರಿ, ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಕುಶಾಲನಗರ ಸೇರಿದಂತೆ ವಿವಿಧ ಭಾಗದಿಂದ ಆಗಮಿಸಿದ್ದ ಕ್ರೈಸ್ತರು ಅಂಬು ಕಾಣಿಕೆಯ ಹರಕೆಗಳನ್ನು ಸಲ್ಲಿಸಿದರು.
ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಗುರು ಟೋಮಿ ಕಳ್ಳಿಪಾತ್ ಹಬ್ಬದ ಆಡಂಬರ ಬಲಿಪೂಜೆ ಹಾಗೂ ಮಕ್ಕಳಿಗೆ ನೂತನ ಪರಮ ಪ್ರಸಾದ ನೀಡಿದರು. ನಂತರ ಸಂತ ಸಬಾಸ್ಟೀನ್ ಅವರ ಮೂರ್ತಿಯನ್ನು ಹಿಡಿದು ದೇವಾಲಯದ ಆವರಣದಲ್ಲಿ ಮೆರವಣಿಗೆ ನಡೆಸಲಾಯಿತು. ಕೊನೆಯಲ್ಲಿ ಆರ್ಶಿವಚನ ನೀಡುವ ಮೂಲಕ 2 ದಿನದ ವಾರ್ಷಿಕೋತ್ಸವ ಸಮಾರಂಭಕ್ಕೆ ತೆರೆ ಎಳೆಯಲಾಯಿತು. ಸೇಕ್ರೆಟ್ ಆರ್ಟ್ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು ಹಾಗೂ ಭಕ್ತರು ಇದ್ದರು.