ಗುಂಡ್ಲುಪೇಟೆ: ಜಿಲ್ಲಾಡಳಿತ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅನ್ನಭಾಗ್ಯ ಹಾಗೂ ಗೃಹ ಲಕ್ಷ್ಮಿ ನೋಂದಣಿ ಕಾರ್ಯ ಯಶಸ್ವಿಯಾಗಿ ನಡೆಯಿತು.
ಸರ್ಕಾರದ ಉಚಿತ ಯೋಜನೆಗಳಲ್ಲಿ ನೋಂದಣಿ ಮಾಡಿಸಿಕೊಳ್ಳಲು ಫಲಾನುಭವಿಗಳು ಬೆಳಗ್ಗೆ 8 ಗಂಟೆಯಿಂದಲೇ ಕಾದು ನಿಂತಿದ್ದರು. ನಡೆಯಲು ಸಾಧ್ಯವಾಗದ ವೃದ್ಧೆಯನ್ನು ಎರಡೂ ಕೈಗಳಲ್ಲಿ ಎತ್ತಿಕೊಂಡು ಬಂದ ಸಿಬ್ಬಂದಿ ನೋಂದಣಿ ಮಾಡಿಸಿದರು. ಶಿಶು ಅಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಮ 1 ಕೇಂದ್ರಗಳವರು, ಅಂಚೆ ಕಚೇರಿ ಹಾಗೂ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಸುಮಾರು 20 ಡೇಟಾ ಎಂಟ್ರಿ ಆಪರೇಟರುಗಳು ಮಧ್ಯಾಹ್ನದವರೆಗೂ ಕಾರ್ಯನಿರ್ವಹಿಸಿ ಎಲ್ಲ ಅರ್ಜಿಗಳನ್ನೂ ದಾಖಲಿಸಿದರು.
ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದರೂ ಅದರ ಸ್ಥಿತಿಗತಿ ಬಗ್ಗೆ ತಿಳಿಯಲು 480 ಮಹಿಳೆಯರು, ಹೊಸದಾಗಿ ಅರ್ಜಿ ಹಾಕಿದ 106, ಇ-ಕೆವೈಸಿ ಹಾಗೂ ಆಧಾರ್ ತಿದ್ದುಪಡಿಗೆ 568 ಹಾಗೂ 200 ಜನರಿಗೆ ಹೊಸ ನೋಂದಣಿ ಮಾಡಲಾಯಿತು. ಹೆಬ್ಬೆರಳ ಗುರುತು ಪತ್ತೆಯಾಗದ ವೃದ್ಧರಿಗೆ ಕಣ್ಣಿನ ಪಾಪೆಯ ಆಧಾರದ ಮೇಲೆ ನೋಂದಣಿ ಮಾಡಲಾಯಿತು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ತಿಳಿಸಿದರು.
ಗ್ರಾಮ್ ಒನ್ ಜಿಲ್ಲಾ ಸಂಯೋಜಕ ನಂಜುಂಡಸ್ವಾಮಿ, ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿ, ಪೋಷಣ್ ಅಭಿಯಾನ ಸಂಯೋಜಕರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.