ಚಿಕ್ಕಮಗಳೂರು: ಕೃಷಿಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬೇಕಾದರೆ ಪಶುಸಂಗೋಪನೆ ಕೈಗೊಳ್ಳಲೇಬೇಕು. ಅದರಲ್ಲೂ ದೇಸಿ ಹಸುಗಳನ್ನು ಸಾಕಣೆ ಮಾಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನೈಸರ್ಗಿಕ ಪದ್ಧತಿ ಕೃಷಿಕ ನಾರಾಯಣಪುರ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಒಂದು ದಿನದ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಣ್ಣಿನಲ್ಲಿರುವ ಕೋಟ್ಯಂತರ ಸೂಕ್ಷ್ಮಾಣು ಜೀವಿಗಳಿಗೆ ನಾವು ಆಹಾರ ನೀಡಿದರೆ ಅವು ನಮ್ಮನ್ನು ಸಾಕುತ್ತವೆ ಎಂಬುದನ್ನು ಅರಿಯಬೇಕು ಎಂದರು.
ಹಸಿರು ಕ್ರಾಂತಿಯಿಂದ ಕೃಷಿಗೆ ಲಾಭವಾಗಿದ್ದಕ್ಕಿಂತ ನಷ್ಟವಾಗಿದ್ದೇ ಹೆಚ್ಚು. ಹಸಿರು ಕ್ರಾಂತಿಗೂ ಮೊದಲು ದೇಶದಲ್ಲಿ ಸುಮಾರು ನಾಲ್ಕು ಲಕ್ಷ ಭತ್ತದ ತಳಿಗಳು ಇದ್ದವು. ಆದರೆ ಹಸಿರು ಕ್ರಾಂತಿಯಿಂದಾಗಿ ನಮ್ಮ ಭತ್ತದ ತಳಿಗಳ ಸಂಖ್ಯೆ 1800ಕ್ಕೆ ಇಳಿಕೆಯಾಗಿದೆ. ಹಸಿರು ಕ್ರಾಂತಿಯಿಂದಾಗಿ ನಾವು ಹೆಚ್ಚು ಇಳುವರಿಗೆ ಪ್ರಾಮುಖ್ಯತೆ ನೀಡಿದೆವೇ ಹೊರತು. ಇತರೆ ತಳಿಗಳಲ್ಲಿದ್ದ ಆರೋಗ್ಯದ ಗುಟ್ಟುಗಳನ್ನು ಅರಿಯದೆ ಹೋದೆವು. ಹೀಗಾಗಿಯೇ ನಾವು ಪ್ರಮುಖ ಭತ್ತದ ತಳಿಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ಬೆಳೆಗಳಲ್ಲಿ ವೈವಿಧ್ಯತೆ ಇದ್ದರೆ ಮಾತ್ರ ಸುಸ್ಥಿರತೆ ಸಾಧ್ಯ. ಹೀಗಾಗಿ ರೈತರು ಮಿಶ್ರಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಉನ್ನತಿ ಸಾಧಿಸಿ, ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.
ಕೆವಿಕೆ ಸಹ ವಿಸ್ತರಣಾ ನಿರ್ದೇಶಕ ಡಾ. ಎಂ.ಶಿವಪ್ರಸಾದ್, ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ಎಂ.ವೈ.ಉಲ್ಲಾಸ, ಮಣ್ಣು ವಿಜ್ಞಾನಿ ಡಾ. ಜಿ.ಎಂ.ಪ್ರಶಾಂತ್, ವಿಜ್ಞಾನಿಗಳಾದ ಡಾ. ಸುಚಿತ್ರಾಕುಮಾರಿ, ಡಾ. ಸುರೇಶಕುಮಾರ್ ಇತರರಿದ್ದರು.