ಬೆಂಗಳೂರು: ಡಾ.ರಾಜಕುಮಾರ್ ಕುಟುಂಬದ ವಿರುದ್ಧ ಹಗುರವಾಗಿ ಮಾತನಾಡಿದ ಆರೋಪದ ಮೇರೆಗೆ ಕನ್ನಡಪರ ಹೋರಾಟಗಾರರು ಪುನೀತ್ ಕೆರೆಹಳ್ಳಿ ಎಂಬಾತನ ಮೇಲೆ ದಾಳಿ ನಡೆಸಿದ್ದು, ಅಂಗಿ ಹಿಡಿದು ಎಳೆದಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಇಂದು ಈ ಪ್ರಕರಣ ನಡೆದಿದೆ.
ಕನ್ನಡಪರ ಹೋರಾಟಗಾರ ಶಿವಕುಮಾರ್ ತಂಡದವರು ಚಾಮರಾಜಪೇಟೆಯಲ್ಲಿ ಇಂದು ರಾತ್ರಿ 8.30ರ ಸುಮಾರಿಗೆ ಪುನೀತ್ ಕೆರೆಹಳ್ಳಿಯನ್ನು ಅಡ್ಡಗಟ್ಟಿ, ಅಂಗಿ ಹಿಡಿದು ಎಳೆದಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಘಟನೆ ಬಗ್ಗೆ ಪುನೀತ್ ರಾಜಕುಮಾರ್ ವಿರುದ್ಧ ಪುನೀತ್ ಕೆರೆಹಳ್ಳಿ ಹಗುರವಾಗಿ ಮಾತನಾಡಿದ್ದ ಎಂದು ಶಿವಕುಮಾರ್ ಮತ್ತಿತರರು ಆರೋಪಿಸಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಆದರೆ ನಾನ್ಯಾಕೆ ಕ್ಷಮೆ ಕೇಳಬೇಕು ಎಂದು ಪುನೀತ್ ವಾದಿಸಿದ್ದು, ವಾಗ್ವಾದ ವಿಕೋಪಕ್ಕೆ ಹೋಗಿ ಹೊಯ್ಕೈ ನಡೆದಿದ್ದು, ಈ ಕುರಿತ ವಿಡಿಯೋ ಕೂಡ ಹರಿದಾಡಲಾರಂಭಿಸಿದೆ.
ಡಾ.ರಾಜಕುಮಾರ್ ಕುಟುಂಬದ ಬಗ್ಗೆ ನೀನು ಹೇಗೆ ಮಾತಾಡಿದೆ ಅಂತ ಫೇಸ್ಬುಕ್ನಲ್ಲಿ ಕನ್ನಡಪರ ಮುಖಂಡ ಶಿವಕುಮಾರ್ ನಾಯ್ಕ್ ಪ್ರಶ್ನಿಸಿದ್ದು, ಬಳಿಕ ಇಬ್ಬರ ಮಧ್ಯೆ ಫೋನ್ನಲ್ಲಿ ಮಾತುಕತೆ ನಡೆದಿದೆ. ಆಗ ನಾನು ಚಾಮರಾಜಪೇಟೆಗೆ ಬಂದಿದ್ದೇನೆ ಬಾ ಎಂದು ಪುನೀತ್ ಕೆರೆಹಳ್ಳಿ ಕರೆದಿದ್ದು, ಅಲ್ಲಿಗೆ ಶಿವಕುಮಾರ್ ಮತ್ತು ತಂಡ ಹೋಗಿದ್ದು, ಅಲ್ಲಿ ಈ ಪ್ರಕರಣ ನಡೆದಿದೆ. ಸದ್ಯ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಮರಾಜಪೇಟೆ ಪೊಲೀಸರಿಂದ ವಿಚಾರಣೆ ನಡೆಸುತ್ತಿದ್ದಾರೆ.